ಬಳ್ಳಾರಿ: ಜಿಲ್ಲೆಯ ತೋರಣಗಲ್ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕಾರ್ಮಿಕ ಇಲಾಖೆ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕೌಶಲ್ಯ ಮತ್ತು ಉದ್ಯೋಗ ಮೇಳ ಆರಂಭವಾಗಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಈ ಮೇಳಕ್ಕೆ ರಾಜ್ಯದ ವಿವಿಧಡೆಯಿಂದ 36 ಸಾವಿರದ 500 ಅಭ್ಯರ್ಥಿಗಳು ಉದ್ಯೋಗ ಬಯಸಿ ನೊಂದಣಿ ಮಾಡಿಕೊಂಡಿದ್ದಾರೆ. 96 ಕಂಪನಿಗಳು ಇದರಲ್ಲಿ ಪಾಲ್ಗೊಂಡಿದ್ದು 11 ಸಾವಿರದ 218 ಜನರಿಗೆ ಉದ್ಯೋಗಕ್ಕೆ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ಆಫರ್ ಲೆಟರ್ ನೀಡಲಿದ್ದಾರೆಂದು ತಿಳಿಸಿದರು.
ಉದ್ಯೋಗ ಮೇಳದಲ್ಲಿ ಟಾಟಾ, ಹಿಂದುಜಾ, ಹೊಂಡಾ ಸೇರಿದಂತೆ ಒಟ್ಟು 96 ಕಂಪನಿಗಳು ಭಾಗವಹಿಸಿವೆ. ಉದ್ಯೋಗ ಸಂದರ್ಶನಕ್ಕಾಗಿ 150 ಕೌಂಟರ್ಗಳನ್ನು ತೆರೆಯಲಾಗಿದೆ. ಉದ್ಯೋಗಕ್ಕಾಗಿ 7600 ಐಟಿಐ, 7000 ಪಿಯುಸಿ, 3200 ಎಸ್ಎಸ್ಎಲ್ಸಿ, 500 ಬಿಇ, 2500 ಸ್ನಾತೋಕತ್ತರ ಮತ್ತು 5500 ಇತರೆ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಶೇಕಡಾ 82 ರಷ್ಟು ಅಭ್ಯರ್ಥಿಗಳು ಜಿಲ್ಲೆಯವರಾಗಿದ್ದಾರೆ.
ನಿಗಮದಿಂದ ಮುಂದಿನ ದಿನದಲ್ಲಿ ಭಾರತ ಸೈನ್ಯದಲ್ಲಿ ಸೇರಲು ಬಯಸುವ ಒಂದು ಸಾವಿರ ಯುವ ಜನತೆಗೆ ಬೆಳಗಾವಿ ಮತ್ತು ಮಡಿಕೇರಿಯಲ್ಲಿ ಎರೆಡು ತಿಂಗಳು ತರಬೇತಿ ನೀಡಲಿದೆ. ಈ ತಿಂಗಳ 19 ರಂದು ಬೆಂಗಳೂರಿನಲ್ಲಿ ಹಿರಿಯ ನಾಗರಿಕರಿಗೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳಿಧರ ಹಾಲಪ್ಪ ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಅಮರನಾಥ್ ಪಾಟೀಲ್, ಅಲ್ಲಂ ವೀರಭದ್ರಪ್ಪ ಹಾಗೂ ಸಂಡೂರು ಶಾಸಕ ತುಕಾರಾಂ ಸೇರಿದಂತೆ ಹಲವು ಗಣ್ಯರು ಉದ್ಯೋಗ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.