ಹಾವೇರಿ: ಆಡಳಿತ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರ ಸಹೋದರಿ ಆಡಳಿತ ಮಂಡಳಿ ನಿರ್ದೇಶಕರೊಬ್ಬರ ಮೇಲೆ ಕೊರಳುಪಟ್ಟಿ ಹಿಡಿದು ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆಗಸ್ಟ್ 16 ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಬಿಎಜಿಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಸಚಿವ ರುದ್ರಪ್ಪ ಲಮಾಣಿ ಅವರ ಸಹೋದರಿ ಪ್ರೇಮಾ ಡೊಂಬರಹಳ್ಳಿ ಅವರು ಕಾಲೇಜಿನ ನಿರ್ದೇಶಕರಾಗಿರುವ ಗೋಪಾಲ್ ಲಮಾಣಿ ಎಂಬವರ ಕೊರಳಪಟ್ಟಿ ಹಿಡಿದು ಹಲ್ಲೆಗೆ ಮುಂದಾಗೋ ಮೂಲಕ ತಮ್ಮ ದರ್ಪ ತೋರಿಸಿದ್ದಾರೆ.
ಸಂಸ್ಥೆಗೂ ಮತ್ತು ಗೋಪಾಲನಿಗೂ ಸಂಬಂಧವಿಲ್ಲ. ಕೂಡಲೇ ಆತನನ್ನ ಸಭೆಯಿಂದ ಹೊರಹಾಕುವಂತೆ ಪಟ್ಟು ಹಿಡಿದಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ರಾಣೇಬೆನ್ನೂರು ಸಿಪಿಐ ಅವರು ಗೋಪಾಲರನ್ನ ಕೆಲಕಾಲ ಸಭೆಯಿಂದ ಹೊರಗೆ ಕಳಿಸೋ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. ಈ ಕುರಿತು ಕಾಲೇಜಿನ ನಿರ್ದೇಶಕ ಗೋಪಾಲ್ ಲಮಾಣಿ ಆ.17 ರಂದು ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಸಚಿವರ ಸಹೋದರಿ ಪ್ರೇಮಾ ವಿರುದ್ಧ ಜೀವ ಬೆದರಿಕೆ ಹಾಕಿದ್ದಾರೆ ಅಂತಾ ದೂರು ದಾಖಲಿಸಿದ್ದಾರೆ.
ಗೋಪಾಲ್ ಅವರು ದೂರು ದಾಖಲಿಸಿದ ಕೂಡಲೇ ಸಚಿವರ ಸಹೋದರಿ ಪ್ರೇಮಾ ಸಹ ಆಗಸ್ಟ್ 18 ರಂದು ಆರು ಜನರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಕಾಲೇಜಿನಲ್ಲಿ ಸಿಪಾಯಿ ಅಂತಾ ನೌಕರಿ ಮಾಡಿಕೊಂಡಿರುವ ಸಮಯದಲ್ಲಿ ಗೋಪಾಲ್ ಲಮಾಣಿ ಸೇರಿದಂತೆ ಆರು ಜನರು ಗುಂಪು ಕಟ್ಟಿಕೊಂಡು ಬಂದು ಮೀಟಿಂಗ್ ರೂಮಿನ ಕೀಲಿ ತೆಗೆಯುವಂತೆ ಕೇಳಿದಾಗ ಕೀಲಿ ತೆಗೆಯುವುದಿಲ್ಲ ಎಂದಾಗ ಜಾತಿ ನಿಂದನೆ ಮಾಡಿ ಬೈದಾಡಿ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿ ರೂಮಿಗೆ ಅತಿಕ್ರಮಣ ಪ್ರವೇಶ ಮಾಡಿ ಜೀವಬೆದರಿಕೆ ಹಾಕಿದ್ದಾರೆ ಅಂತಾ ಪ್ರೇಮಾ ಅವರು, ಗೋಪಾಲ್ ಲಮಾಣಿ, ಮಹಾದೇವಗೌಡ ಪಾಟೀಲ್, ಶಶಿಧರ ಸುಂಕಾಪುರ, ವಿಷ್ಣು ಜಿಂಗಾಡೆ, ಬಸವರಡ್ಡಿ ಗಿರಡ್ಡಿ ಸಿದ್ದಪ್ಪ ಅಂಬಲಿ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.
ಸಹೋದರಿ ಮೇಲೆ ಸಂಸ್ಥೆಗೆ ಸಂಬಂಧವೇ ಇಲ್ಲದವರು ಹಲ್ಲೆ ಮಾಡಿದ್ದರಿಂದ ಸಹೋದರಿ ಆ ರೀತಿ ನಡೆದುಕೊಂಡಿದ್ದಾಳೆ. ಸಂಸ್ಥೆಯ ಆಡಳಿತ ಮಂಡಳಿ ನಮ್ಮದೇ ನಮ್ಮ ಪರವಾಗಿ ಎಲ್ಲ ದಾಖಲೆಗಳಿವೆ ಎಂದು ಮುಜುರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ. ಸಂಸ್ಥೆಯ ವಿರುದ್ಧ ಆರೋಪ ಮಾಡುವವರು ಎಲ್ಲ ದಾಖಲೆಗಳನ್ನ ತೆಗೆದುಕೊಂಡು ವೇದಿಕೆಗೆ ಬರಲಿ ನಾನು ಬರುತ್ತೆನೆ. ಸಂಸ್ಥೆ ಆಡಳಿತ ಮಂಡಳಿ ವಿಚಾರದಲ್ಲಿ ಮಾಜಿ ಸಚಿವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿಯಿಂದ ಕಿರಿಕಿರಿ ಆಗುತ್ತಿದೆ ಎಂದರು.