ಮಂಡ್ಯ: ಚಳವಳಿ ಮಾಡುವವರು ನಾಯಿಗಳು ಎನ್ನುವುದಾದರೆ, ಈ ರೀತಿ ಹೇಳುವವರು ಹುಚ್ಚುನಾಯಿಗಳಾಗಿರಬೇಕು ಎಂದು ಕೇಂದ್ರ ಸಚಿವ ಅನಂತ್ಕುಮಾರ್ ಹೆಗ್ಡೆ ವಿರುದ್ಧ ರೈತ ನಾಯಕ, ಮೇಲುಕೋಟೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಳವಳಿಗಾರರನ್ನು ಗೌರವಿಸುವ ಜ್ಞಾನವಿಲ್ಲದ ಸಚಿವರು, ನಾಯಿಗಳು ಎಂದು ಹೇಳುತ್ತಾರೆ. ಆದರೆ, ಹೋರಾಟ ಮಾಡುವ ನಾವುಗಳೆಲ್ಲಾ ನಿಯತ್ತಿನ ನಾಯಿಗಳು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತನಾಡುತ್ತಾರೆ. ಜೊತೆಗೆ ಅವರು ಸಂವಿಧಾನ ಬದಲಾಯಿಸುತ್ತೇನೆ ಎನ್ನುತ್ತಾರೆ. ನಮಗೆ ತುರ್ತಾಗಿ ಇವರು ಬದಲಾಗಬೇಕಿದೆ ಎಂದರು.
ಇತ್ತೀಚಿಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಸಿಪಿ ಯೋಗೇಶ್ವರ್ ಅವರು ಪರಿವರ್ತನಾ ಯಾತ್ರೆ ವೇಳೆ ರೈತ ಸಂಘದ ಬಗ್ಗೆ ಮಾತನಾಡಿದ್ದಾರೆ. ಕ್ಷೇತ್ರದಲ್ಲಿ ಕೆರೆ ತುಂಬಿಸಿಲ್ಲ ಅಂತ ಟೀಕಿಸಿದ್ದಾರೆ. ಆದರೆ, ರೈತ ಸಂಘದ ಬಗ್ಗೆ ಮಾತನಾಡುವ ನೈತಿಕತೆ ಯೋಗೇಶ್ವರ್ಗೆ ಎಲ್ಲಿದೆ. ಆತ ಗದ್ದೆಗೆ ಯಾವತ್ತು ಹೋಗಿದ್ದರು. ಪಕ್ಷದಿಂದ ಪಕ್ಷಕ್ಕೆ ಹೋಗುವ ಅವರು ನಮ್ಮ ಬಗ್ಗೆ ಏನು ಮಾತನಾಡುತ್ತಾರೆ. ಹಿಂದೊಮ್ಮೆ ಅವರ ಚಿತ್ರದಲ್ಲಿ ನಾನು ಕೂಡ ಅಭಿನಯ ಮಾಡಿದ್ದೆ. ಆದರೀಗ ನನಗೆ ಟಾಂಗ್ ಕೊಡುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾತ್ರೆಗಳ ಬಗ್ಗೆಯೂ ಟೀಕಿಸಿದ ಪುಟ್ಟಣ್ಣಯ್ಯ, ಈ ಬಾರಿ ಕೆಟ್ಟ ರಾಜಕೀಯ ಪರಿಸ್ಥಿತಿ ಇದೆ. ನಮ್ಮ ಸ್ವರಾಜ್ ಇಂಡಿಯಾ ಪಕ್ಷದಿಂದ 15 ರಿಂದ 20 ಅಭ್ಯರ್ಥಿಗಳನ್ನು ಆಯ್ಮೆ ಮಾಡಿಕೊಡಲಾಗಿದೆ. ಉಳಿದ ಕ್ಷೇತ್ರಕ್ಕೂ ಅಭ್ಯರ್ಥಿಗಳ ಹುಡುಕಾಟ ನಡೆಯುತ್ತಿದೆ. ಇನ್ನು ರಾಜಕೀಯಕ್ಕೆ ನನ್ನ ಮಗ ಬರುವುದು, ಬಿಡುವುದು ಅವನಿಗೆ ಬಿಟ್ಟ ವಿಚಾರ ಎಂದರು.
https://www.youtube.com/watch?v=ZXAssO6WKFM