ಕಲಬುರಗಿ: ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸೋಮಣ್ಣ ಲಿಂಗದೀಕ್ಷೆ ಪಡೆದಿದ್ದಾರೆ. ಅವರಿಗೆ ಲಿಂಗಾಯತ ಸಂಪ್ರದಾಯ ಪ್ರಕಾರ ಶವಸಂಸ್ಕಾರ ಮಾಡಲಾಗುತ್ತದೆ. ಅವರಿಗೆ ಬಿಜೆಪಿಯಿಂದ ಶವ ಸಂಸ್ಕಾರ ಯಾರು ಮಾಡುವುದಿಲ್ಲ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಕಲಬುರಗಿ ಬೃಹತ್ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿ, ಧರ್ಮಕ್ಕಾಗಿ ಹೋರಾಟ ಮಾಡಬೇಕು ಹೊರತು ಪಕ್ಷಕ್ಕಾಗಿ ಅಲ್ಲ. ಬಿಜೆಪಿಯವರು ಮೌನವಾಗಿದ್ದಾರೆ. ಹಾಗಾಗಿ ಅವರು ಕೂಡಾ ಈ ಹೋರಾಟಕ್ಕೆ ಬರಬೇಕು ಎಂದು ಹೇಳಿದರು.
ಬಸವಣ್ಣನವರ ಅಂಕಿತನಾಮ ಬದಲಾಯಿಸಿದ್ದ ಬಸವದೀಪ್ತಿ ಪುಸ್ತಕ ಮರು ಮುದ್ರಣ ಮಾಡಲಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾತೆ ಮಹಾದೇವಿ ಅವರು ಮನವಿ ಮಾಡಿಕೊಂಡಿದ್ದಾರೆ.
ದಲಿತರು ಕೂಡಾ ಎಲ್ಲಾ ಕಡೆ ಹೋರಾಟ ಮಾಡಲಿಕ್ಕೆ ನಮ್ಮ ಜೊತೆ ಸಿದ್ಧರಿದ್ದಾರೆ ಮತ್ತು ಮುಸ್ಲಿಮ್ ಧರ್ಮದವರು ಕೂಡಾ ನಮಗೆ ಸಹಕಾರವನ್ನು ನೀಡುತ್ತಿದ್ದಾರೆ ಹಾಗಾಗಿ ಈ ಹೋರಾಟಕ್ಕೆ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದರು.
ಈ ವೇಳೆ ಸಮಾವೇಶದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರು ಮಾತೆ ಮಹಾದೇವಿ ಅವರಲ್ಲಿ ಸುಪ್ರೀಂ ಕೋರ್ಟ ಆದೇಶ ಪಾಲನೆ ಮಾಡಿ, ಅದಕ್ಕೂ ಹೆಚ್ಚಾಗಿ ನಿಮ್ಮ ಭಕ್ತರ ಆದೇಶ ಪಾಲನೆ ಮಾಡಿ ಎಂದು ಮನವಿ ಮಾಡಿಕೊಂಡರು.