ಜೈಪುರ: ರಾಜಸ್ಥಾನದಲ್ಲಿ ವಿವಾಹಿತ ಮಹಿಳೆ ಮತ್ತು ಪ್ರಿಯಕರ ಪಾಳು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು ಯುವಕನನ್ನು ರಕ್ಷಿಸಲಾಗಿದೆ.
ನಿಮ್ರಾನಾ ಗ್ರಾಮದ ಸವಿತಾ (35) ಮತ್ತು ಹಿಮ್ಮತ್ (22) ಪರಸ್ಪರ ಪ್ರೀತಿಸುತ್ತಿದ್ದರು. ಸವಿತಾಗೆ ಈಗಾಗಲೇ ಕಾರ್ಮಿಕನೊಬ್ಬರ ಜೊತೆ ಮದುವೆಯಾಗಿ ಮಗುವೂ ಕೂಡ ಇತ್ತು. ಆದರೆ ಹಿಮ್ಮತ್ಗೆ ಇನ್ನು ಮದುವೆಯಾಗಿರಲಿಲ್ಲ. ಇವರ ಪ್ರೀತಿಯನ್ನು ಸಮಾಜ ಒಪ್ಪದ ಹಿನ್ನೆಲೆಯಲ್ಲಿ ಇವರಿಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.
ಅನೈತಿಕ ಸಂಬಂಧ ಹೊಂದಿದ್ದ ಇವರಿಬ್ಬರು ವಿಷ ಸೇವಿಸಿ ಗ್ರಾಮದಲ್ಲಿದ್ದ ಒಂದು ಪಾಳು ಬಾವಿಗೆ ಹಾರಿದ್ದಾರೆ. ಸ್ವಲ್ಪ ಸಮಯದ ನಂತರ ಗ್ರಾಮಸ್ಥರು ಬಾವಿಯ ಪಕ್ಕ ಬಿದ್ದಿದ್ದ ಪಾದರಕ್ಷೆ ಮತ್ತು ಬಟ್ಟೆಗಳನ್ನು ನೋಡಿ ಇಣುಕಿದ್ದಾರೆ. ಈ ವೇಳೆ ಇಬ್ಬರು ವ್ಯಕ್ತಿಗಳು ಇರುವುದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾವಿಯ ಪಕ್ಕ ಬಿದ್ದಿದ್ದ ಆಧಾರ್ ಕಾರ್ಡ್ ನೋಡಿ ಇವರಿಬ್ಬರನ್ನು ಗುರುತಿಸಿದ್ದಾರೆ. ಬಳಿಕ ಬಾವಿಯಿಂದ ಮೇಲಕ್ಕೆತ್ತುವ ಯಂತ್ರವನ್ನು ತರಿಸಿ ಸುಮಾರು ಎರಡು ಗಂಟೆಯಲ್ಲಿ ಇಬ್ಬರನ್ನು ಮೇಲಕ್ಕೆತ್ತಿದ್ದಾರೆ. ಈ ವೇಳೆ ಹಿಮ್ಮತ್ ಬದುಕಿದ್ದ. ಆದರೆ ಮಹಿಳೆ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಸವಿತಾ ಮತ್ತು ಹಿಮ್ಮತ್ ಇಬ್ಬರು ಬಹಳ ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಆದ್ದರಿಂದ ಇಬ್ಬರು ಮನೆಯಿಂದ ಓಡಿ ಹೋಗಲು ಪ್ರಯತ್ನಿಸಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ. ಕೆಲವು ದಿನಗಳಿಂದ ಇವರಿಬ್ಬರು ಕಾಣೆಯಾಗಿದ್ದರು. ಈ ಬಗ್ಗೆ ಪೋಷಕರನ್ನು ಪ್ರಶ್ನಿಸಿದಾಗ ಈ ಸಂಬಂಧ ಯಾವುದೇ ದೂರು ದಾಖಲಿಸಿರಲಿಲ್ಲ ಎಂದು ತಿಳಿಸಿದ್ದಾರೆ.