– ಮಾನವೀಯತೆ ಮರೆತ ಪಣಂಬೂರು ಪೊಲೀಸರು
ಮಂಗಳೂರು: ಎರಡು ಕುಟುಂಬಗಳ ಜಗಳದಲ್ಲಿ ತೀವ್ರ ಹಲ್ಲೆಗೊಳಗಾದ ದಂಪತಿಯನ್ನ ಪೊಲೀಸರು ಆಸ್ಪತ್ರೆಗೆ ಒಯ್ಯುವ ಬದಲು ನಡು ರಸ್ತೆಯಲ್ಲಿ ಬಿಟ್ಟು ಹೋದ ಘಟನೆ ಮಂಗಳೂರಿನ ಬೆಂಗ್ರೆ ಎಂಬಲ್ಲಿ ನಡೆದಿದೆ.
ಮೆಹಮೂದ್ ಮತ್ತು ಅವರ ಪತ್ನಿ ಫಮೀನಾ ಎಂಬವರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿತ್ತು. ಈ ಬಗ್ಗೆ ಸುದ್ದಿ ತಿಳಿದ ಪಣಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಮನೆಯಲ್ಲಿ ಬಿದ್ದಿದ್ದ ದಂಪತಿಯನ್ನು ಆಸ್ಪತ್ರೆಗೆ ಒಯ್ಯುವುದಾಗಿ ಹೇಳಿ ಜೀಪಿನಲ್ಲಿ ಕರೆದೊಯ್ದಿದ್ದರು. ಆದರೆ ದಾರಿ ಮಧ್ಯೆ ಕುಳೂರು ಎಂಬಲ್ಲಿ ಪೊಲೀಸರು ಗಾಯಾಳು ದಂಪತಿ ಮತ್ತು ಮಗುವನ್ನು ಜೀಪಿನಿಂದ ಇಳಿಸಿ ಹೋಗಿದ್ದರು.
ವಿಷಯ ತಿಳಿದ ಡಿವೈಎಫ್ಐ ಕಾರ್ಯಕರ್ತರು ತೆರಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. 20 ನಿಮಿಷ ಕಾಲ ಹೆದ್ದಾರಿ ತಡೆದು ಪ್ರತಿಭಟಿಸಿದರೂ ಪೊಲೀಸರು ಆಗಮಿಸಿರಲಿಲ್ಲ. ಬಳಿಕ ದಂಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಣಂಬೂರು ಪೊಲೀಸರ ಅಮಾನವೀಯತೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.