ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಬಳಿ ಬ್ರೇಕ್ ಫೇಲಾಗಿದ್ದ ಕಾಲೇಜಿನ ವಾಹನವನ್ನು ಯಾವುದೇ ಅಪಾಯ ಸಂಭವಿಸದಂತೆ ನಿಲ್ಲಿಸುವ ಮೂಲಕ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಬಸ್ ಚಾಲಕ ಸುನಿಲ್ ಅವರ ಸಮಯ ಪ್ರಜ್ಞೆಯಿಂದ ಅಪಘಾತವೊಂದು ತಪ್ಪಿದೆ. ಮೈಸೂರಿನ ಎಂಐಟಿ ಕಾಲೇಜಿಗೆ ಸೇರಿದ ಬಸ್ನಲ್ಲಿ ಆರು ಜನ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ಬಸ್ನ ಬ್ರೇಕ್ ಫೇಲ್ ಆಗಿದ್ದು ಚಾಲಕ ಸುನಿಲ್ ಗಮನಕ್ಕೆ ಬಂದಿದೆ. ಸುನಿಲ್ ಎದೆಗುಂದದೆ ವಾಹನದ ವೇಗವನ್ನ ನಿಧಾನಗತಿಗೆ ತಂದು ಸುಮಾರು ಒಂದು ಕಿಲೋಮೀಟರ್ನಷ್ಟು ದೂರ ವಾಹನ ಚಲಾಯಿಸಿದ್ದಾರೆ.
ವಾಹನದ ವೇಗ ಕಡಿಮೆಯಾಗುತ್ತಿದ್ದಂತೆ ಸುನಿಲ್ ರಸ್ತೆಪಕ್ಕ ಬಸ್ ನಿಲ್ಲಿಸುವ ಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಲೇಜು ವಾಹನ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗದೆ ಎಲ್ಲರೂ ಸುರಕ್ಷಿತವಾಗಿದ್ದಾರೆ.