ಮಡಿಕೇರಿ: ಎದುರು ಮನೆಯ ಮಹಿಳೆಯೊಂದಿಗೆ ಪ್ರೀತಿಯಾಗಿ ಪತ್ನಿಯನ್ನೇ ಬಿಟ್ಟು ಪತಿ ಪರಾರಿಯಾಗಿರೋ ಘಟನೆ ಜಿಲ್ಲೆಯ ಗೋಣಿಕೊಪ್ಪದ ಕುಂದಾ ಎಂಬ ಗ್ರಾಮದಲ್ಲಿ ನಡೆದಿದೆ. ಇತ್ತ ಪತಿಗೋಸ್ಕರ ಹೆಂಡತಿ ಬೀದಿ ಬೀದಿ ಸುತ್ತುತ್ತಿದ್ರೆ, ಮತ್ತೊಂದೆಡೆ ಎದುರು ಮನೆಯ ಮಹಿಳೆಯ ಗಂಡ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಹುಡುಕಾಟ ನಡೆಸುತ್ತಿದ್ದಾರೆ.
ಪವನಾ ಭಟ್ ಮತ್ತು ಶಶಿಧರ್ ಭಟ್ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿವೆ. ಆದರೂ ಎದುರು ಮನೆಯ ಇನ್ನೊಬ್ಬರ ಪತ್ನಿಯ ಜೊತೆ ಪ್ರೀತಿಯಾಗಿ ಆಕೆಯ ಜೊತೆ ಶಶಿಧರ್ ಭಟ್ ಪರಾರಿಯಾಗಿದ್ದಾನೆ. ಪತಿಯ ಹುಡುಕಟದಲ್ಲಿ ಪತ್ನಿ ಪವನಾ ಭಟ್ ಬೀದಿ ಬೀದಿ ಸುತ್ತಾಡುತ್ತಿದ್ದಾರೆ.
ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗುವಿದೆ. ಈ ಕುಟುಂಬ ಕುಂದಾ ಗ್ರಾಮದಲ್ಲಿ ಪುರೋಹಿತಿಕೆ ಕೆಲಸವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಗ್ರಾಮದ ಇನ್ನೊಂದು ಜೋಡಿ ಲಸಿಕಾ ಮತ್ತು ನವೀನ್ ನಾಚಪ್ಪ ಬಿಸಿನೆಸ್ ಮಾಡಿಕೊಂಡು ಇದ್ದರು. ಇವರಿಗೆ ಒಂದು ಗಂಡು ಮಗು ಇದೆ. ಈ ಎರಡು ದಂಪತಿ ಎದುರು ಬದರು ಮನೆಯಲ್ಲೇ ವಾಸವಾಗಿದ್ದರಿಂದ ಪರಿಚಯವಾಗಿತ್ತು.
ಶಿಶಿಧರ್ ಭಟ್ ಹಾಗೂ ಲಸಿಕಾ ಅವರ ಮಧ್ಯ ಪರಿಚಯದಿಂದ ಲವ್ವಿಡವ್ವಿ ಶುರುವಾಗುತ್ತು. ಇದನ್ನು ತಿಳಿದ ಪವನಾ ಗಂಡನೊಂದಿಗೆ ಜಗಳವಾಡಿದ್ದರು. ಇತ್ತ ಲಸಿಕಾಳ ಗಂಡನಿಗೂ ಇವರ ರಹಸ್ಯ ಪ್ರೇಮದ ಬಗ್ಗೆ ತಿಳಿಸಿದ್ದರು. ಆದರೆ ನವೀನ್ ನನ್ನ ಹೆಂಡತಿ ಹಾಗಲ್ಲ ಅಂತಾ ಪವನಾ ಅವರನ್ನೇ ಬೈದು ಕಳುಹಿಸಿದ್ದರು. ಕೊನೆಗೆ ಪತಿಯ ಪರಸ್ತ್ರೀ ಸಂಗಕ್ಕೆ ಬೇಸತ್ತು ಪವನಾ ತವರುಮನೆ ಸೇರಿದ್ದಾರೆ.
ಪವನಾ ಮನೆ ಬಿಟ್ಟು ಹೋದ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಲಸಿಕಾ ತನ್ನ ಪತಿ, ಮಕ್ಕಳನ್ನು ಬಿಟ್ಟು ಶಶಿಧರ್ ಭಟ್ನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪತಿ ನವೀನ್ ನಾಚಪ್ಪ ಗೋಣಿಕೋಪ್ಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ಮಡಕೇರಿಯಲ್ಲಿ ಎಲ್ಲಾ ಕಡೆ ಹುಡುಕಾಡುತ್ತಿದ್ದಾರೆ.
ಪತಿ ಶಶಿಧರ್ ಭಟ್ ಲಸಿಕಾ ಜೊತೆ ಪರಾರಿಯಾಗಿರುವ ವಿಚಾರ ತಿಳಿದ ಪವನಾ ಕೂಡ ಬೆಂಗಳೂರಿಗೆ ಬಂದಿರಬಹುದು ಎಂಬ ಅನುಮಾನದಿಂದ ಪತಿ ಮುಂಚೆ ಯಾವೆಲ್ಲ ದೇವಾಲಯಗಳಲ್ಲಿ ಪೂಜೆ ಮಾಡುತ್ತಿದ್ದ ಅಲ್ಲೆಲ್ಲಾ ಹೋಗಿ ಬೀದಿಬೀದಿ ಸುತ್ತುತ್ತಾ ಹುಡುಕಾಡುತ್ತಿದ್ದಾರೆ.