ಬೆಂಗಳೂರು: ನಾನು ಎಸ್ಪಿ ಅಣ್ಣಾಮಲೈ ಸ್ನೇಹಿತ, ಪೈಲೆಟ್ ಆಗಿ ತಿಂಗಳಿಗೆ ಎರಡುವರೆ ಲಕ್ಷ ಸಂಬಳಗಳಿಸುತ್ತಿದ್ದೇನೆ. ಸದ್ಯ ನನ್ನ ಅಕೌಂಟ್ ಬ್ಲಾಕ್ ಆಗಿದೆ, ಹಣ ಸಹಾಯ ಮಾಡಿ ಎಂದು ಹೇಳಿ ವಂಚಿಸುತ್ತಿದ್ದ ವ್ಯಕ್ತಿಯನ್ನು ವಂಚನೆಗೊಳಗಾದವರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಶಿವಮೊಗ್ಗ ಮೂಲದವನಾದ ಪ್ರಮೋದ್ ಕಾರಂತ್, ಹೆಸರಾಂತ ಚಿತ್ರ ನಟರು, ಉದ್ಯಮಿಗಳು ಹಾಗೂ ಎಸ್ಪಿ ಅಣ್ಣಾಮಲೈರಂತಹ ಅಧಿಕಾರಿಗಳೊಂದಿಗಿನ ಫೋಟೋ ತೋರಿಸಿ ಮೋಸ ಮಾಡುತ್ತಿದ್ದ. ಈಗ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದಲ್ಲಿ ಈತನನ್ನು ವಂಚನೆಗೊಳಗಾದವರು ಹಿಡಿದಿದ್ದಾರೆ.
ಸುಳ್ಳು ಹೇಳುವುದರ ಜೊತೆಗೆ ಅಣ್ಣಾಮಲೈ ಸ್ನೇಹಿತ ಎಂದು ಹೇಳಿ, ನಾನು ಅವರಿಂದ ಸ್ಫೂರ್ತಿ ಪಡೆದು ಐಪಿಎಸ್ ಪಾಸ್ ಆಗಿರುವೆ ಎಂದು ಫೇಸ್ ಬುಕ್ ನಲ್ಲಿ ಪ್ರಮೋದ್ ಕಾರಂತ್ ಪೋಸ್ಟ್ ಹಾಕಿದ್ದ.
ಸದ್ಯ ನಾನು ಪೈಲೆಟ್ ಆಗಿ ಬೆಂಗಳೂರಿನಲ್ಲಿ ಇದ್ದೇನೆ. ನನ್ನ ಅಕೌಂಟ್ ಬ್ಲಾಕ್ ಆಗಿದೆ, ನನಗೆ ನಗದು ರೂಪದಲ್ಲಿ ಹಣ ನೀಡಿ, ನಿಮಗೆ ವಾಪಸ್ ಮಾಡುತ್ತೇನೆ ಎಂದು ರಾಜ್ಯದ 20ಕ್ಕೂ ಹೆಚ್ಚು ಜನರ ಬಳಿ ಹಣ ಪೀಕಿದ್ದಾನೆ. ಈತನ ನಕಲಿಯಾಟ ಬಯಲಾಗುತ್ತಿದ್ದಂತೆ ಸೆರೆ ಸಿಕ್ಕ ಈತನನ್ನು ವಂಚನೆಗೊಳಗಾದವರು ನೆಲಮಂಗಲ ಪಟ್ಟಣ ಪೊಲೀಸರ ವಶಕ್ಕೆ ನೀಡಿದ್ದಾರೆ.