ಬೆಂಗಳೂರು: ಪೊಲೀಸರನ್ನು ಹೆದರಿಸಲು ಹೋಗಿ ಆತ್ಮಹತ್ಯೆ ನಾಟಕವಾಡಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಮಣಿ ಸಾವನ್ನಪ್ಪಿದ ವ್ಯಕ್ತಿ. ಡ್ರಿಂಕ್ ಅಂಡ್ ಡ್ರೈವ್ ನಿಂದ ಬಿಡಿಸಿಕೊಳ್ಳಲು ಮಣಿ ಪೊಲೀಸರ ಎದುರೇ ಪೆಟ್ರೋಲ್ ಸುರಿದುಕೊಂಡಿದ್ದನು. ಬಳಿಕ ಬೆಂಕಿ ಕೂಡ ಹಚ್ಚಿಕೊಂಡಿದ್ದಾನೆ. ಕುಡಲೇ ಆತನನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇಆತ ಮೃತಪಟ್ಟಿದ್ದಾನೆ.
ಮಣಿ ಚಲಾಯಿಸುತ್ತಿದ್ದ ವಾಹನವನ್ನು ಪೊಲೀಸರು ವಶ ಪಡೆದಿದ್ದರು. ಇದರಿಂದ ಮನನೊಂದ ಮಣಿ ನೇರವಾಗಿ ಮನೆಗೆ ಹೋಗಿದ್ದಾನೆ. ನಂತರ ಸುಮಾರು 2 ಗಂಟೆಯ ನಂತರ ವಾಪಾಸ್ ಮೈಕೋ ಲೇಔಟ್ ಸಂಚಾರಿ ಪೊಲೀಸ್ ಠಾಣೆ ಮುಂದೆ ಬಂದ ಆತ, ತನ್ನ ವಾಹನವನ್ನು ಹಿಂತಿರುಗಿಸುವಂತೆ ಹೇಳಿದ್ದಾನೆ. ಅಲ್ಲದೇ ನನ್ನ ಗಾಡಿ ವಾಪಸ್ ಕೊಡದಿದ್ದರೆ ಸಾಯ್ತೀನಿ ಅಂತ ಹೆದರಿಸಿದ್ದಾನೆ. ಇದಕ್ಕೆ ಪೊಲೀಸರು ಒಪ್ಪದಿದ್ದಾಗ ಅವರ ಎದುರೇ ಪೆಟ್ರೋಲ್ ಸುರಿದು ಬೆಂಕಿ ಹಂಚಿಕೊಂಡಿದ್ದಾನೆ ಎಂದು ಮಾಹಿತಿ ಲಭಿಸಿದೆ.