ಮಂಡ್ಯ: ಪೊಲೀಸರು ವಿನಾಕಾರಣ ನನ್ನ ಮಗನ ಮೇಲೆ ರೌಡಿಶೀಟರ್ ಪಟ್ಟ ಕಟ್ಟಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಕಟ್ಟಡದ ಮೇಲೆ ಹತ್ತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿ ಅವಾಂತರ ಸೃಷ್ಟಿಸಿದ್ದಾರೆ.
ಈ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ನಡೆದಿದೆ. ನಾರಗೋನಹಳ್ಳಿ ಗ್ರಾಮದ ರೈತ ರಂಗಶೆಟ್ಟಿ ಎಂಬವರೇ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದವರು.
ಜಮೀನಿನ ವಿಷಯದಲ್ಲಿ ನಡೆದ ಗಲಾಟೆಗೆ ಪೊಲೀಸರು ನನ್ನ ಮಗನ ಮೇಲೆ ರೌಡಿಶೀಟರ್ ಹಾಕಿದ್ದಾರೆ. ಈಗ ಚುನಾವಣೆ ಸಮಯವಾದ್ದರಿಂದ ಬೇಲ್ ತೆಗೆದುಕೊಳ್ಳಲು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಕಾರು ಚಾಲಕನಾಗಿರುವ ನನ್ನ ಮಗ ರಘುವನ್ನು ಠಾಣೆಗೆ ಕರೆಸಿ ಹಿಂಸೆ ನೀಡಿದ್ದಾರೆ ಎಂದು ರಂಗಶೆಟ್ಟಿ ಆರೋಪಿಸಿದ್ದಾರೆ.
ಪೊಲೀಸರ ಕಿರುಕುಳದಿಂದ ನನಗೆ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ರಂಗಶೆಟ್ಟಿ ನಾಗಮಂಗಲದ ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಕಟ್ಟಡದ ಮೇಲೆ ಹತ್ತಿ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ರು. ಇದನ್ನು ನೋಡಿದ ಸಾರ್ವಜನಿಕರು ಆತ್ಮಹತ್ಯೆ ಮಾಡಿಕೊಳ್ಳದಂತೆ ರಂಗಸ್ವಾಮಿಯವರನ್ನು ಕೂಗಿಕೊಂಡಿದ್ದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೊನೆಗೆ ಸಾವಜನಿಕರು ಉಪಾಯವಾಗಿ ರಂಗಸ್ವಾಮಿಯನ್ನು ಕೆಳಗಿಳಿಸಿ ನಿಟ್ಟುಸಿರುಬಿಟ್ಟಿದ್ದಾರೆ. ಆದ್ರೆ ರಂಗಸ್ವಾಮಿಯ ಆರೋಪವನ್ನು ನಿರಾಕರಿಸಿರುವ ಪೊಲೀಸರು ಕಾರಣವಿಲ್ಲದೇ ಯಾರ ಮೇಲೂ ರೌಡಿಶೀಟರ್ ಹಾಕಿಲ್ಲ ಅಂತಿದ್ದಾರೆ.