ಕಲಬುರಗಿ: ಸದಾ ಸಿಎಂ ಸಿದ್ದರಾಮಯ್ಯ ಅವರ ನಿಲುವುಗಳನ್ನು ಸಮರ್ಥಿಸಿ ಸರ್ಕಾರದ ಬೆಂಬಲಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿಲ್ಲುತ್ತಿದ್ದರು. ಇದೀಗ ಅಶೋಕ್ ಖೇಣಿ ಸೇರ್ಪಡೆ ಮತ್ತು ಗದಗ ಜಿಲ್ಲೆಗೆ ವಿಶೇಷ ಸ್ಥಾನಮಾನದ ಸಿಎಂ ನಿರ್ಣಯಗಳಿಂದ ಆಕ್ರೋಶಗೊಂಡಿದ್ದು, ಇದೀಗ ಸಿಎಂ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಧಾನವನ್ನು ಹೊರ ಹಾಕಿದ್ದಾರೆ.
ರಾಜ್ಯ ರಾಜಕಾರಣ ಸೇರಿದಂತೆ ಹೈದರಾಬಾದ್ ಕರ್ನಾಟಕದ ಮುಂಚೂಣಿ ನಾಯಕ ಅಂದ್ರೆ ಮಲ್ಲಿಕಾರ್ಜುನ ಖರ್ಗೆ. ಆದರೆ ಇಂತಹ ನಾಯಕನನ್ನು ಇದೀಗ ಸಿಎಂ ಸಿದ್ದರಾಮಯ್ಯ ಸೈಡ್ ಲೈನ್ ಮಾಡಿದ್ದು, ಅದರ ಮೊದಲ ಹೆಜ್ಜೆಯಾಗಿ ಖರ್ಗೆ ವಿರೋಧದ ಮಧ್ಯೆ ನೈಸ್ ಮುಖ್ಯಸ್ಥ ಮತ್ತು ಬೀದರ್ ದಕ್ಷಿಣ ಶಾಸಕರಾಗಿರುವ ಅಶೋಕ್ ಖೇಣಿ ಅವರನ್ನು ಸಿದ್ದರಾಮಯ್ಯ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಖರ್ಗೆ ಅವರು, ಮಾಧ್ಯಮಗಳ ಜೊತೆ ಮಾತನಾಡುತ್ತ ಖೇಣಿ ಪಕ್ಷಕ್ಕೆ ಯಾಕೆ ಬಂದಿದ್ದಾರೋ ಗೊತ್ತಿಲ್ಲ, ಅವರನ್ನು ಯಾರು ಕರೆ ತಂದರು? ಅವರಿಂದ ಏನು ಲಾಭ? ಅಂತಾ ಪರೋಕ್ಷವಾಗಿ ಸಿಎಂ ವಿರುದ್ಧ ಖರ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಇತ್ತೀಚೆಗೆ ಹೈಕ ಭಾಗಕ್ಕೆ ಗದಗ ಜಿಲ್ಲೆ ಸೇರ್ಪಡೆಯ ವಿಷಯ ಪದೇ ಪದೇ ಪ್ರಸ್ತಾಪವಾಗುತ್ತಿದೆ. ಕೆಲವರು ರಾಜಕೀಯ ಅಲ್ಲಿನ ಜನರನ್ನ ಒಲೈಸಿಕೊಳ್ಳಲು ಈ ವಿವಾದ ಹುಟ್ಟಿಸಿದ್ದಾರೆ. ಈ ವಿಷಯ ಕುರಿತು ಒಂದು ವೇಳೆ ರಾಜ್ಯ ಸರ್ಕಾರ ಒಪ್ಪಿದರೂ ನಾನು ಒಪ್ಪೋದಿಲ್ಲ ಅಂತಾ ಸರ್ಕಾರಕ್ಕೆ ಮಲ್ಲಿಕಾರ್ಜುನ್ ಖರ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆದರಿಕೆ ಕರೆ: ಕೇಂದ್ರದಲ್ಲಿ ಬಿಜೆಪಿ ನಾಯರಿಗೆ ಅಷ್ಟೇ ಅಲ್ಲ, ನನಗೂ ಸಹ ಅನಾಮಿಕರಿಂದ ಬೆದರಿಕೆ ಕರೆ ಬರುತ್ತಿವೆ. ಕರೆ ಮಾಡಿ ಬೆದರಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಇಲ್ಲ ಸಲ್ಲದ್ದನ್ನು ಬಿಂಬಿಸಿ ಬೆದರಿಸುವ ಕೆಲಸ ನಿರಂತರವಾಗಿ ನಡೆದಿದೆ. ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ದೆಹಲಿಯ ತುಘಲಕ್ ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಆಪ್ತ ಸಹಾಯಕ ಎರಡು ತಿಂಗಳ ಹಿಂದೆಯೇ ದೂರು ದಾಖಲಿಸಿದ್ದಾರೆ. ಅಲ್ಲದೆ, ನಾನೇ ಖುದ್ದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹಾಗೂ ಸ್ಪೀಕರ್ ಅವರಿಗೆ ಲಿಖಿತವಾಗಿ ದೂರು ನೀಡಿದ್ದೇನೆ ಎಂದರು.