ಭೋಪಾಲ್: ಮಧ್ಯಪ್ರದೇಶದ ಸಾಲ್ಮತ್ಪುರ್ನ ಗುಡ್ಡಪ್ರದೇಶದಲ್ಲಿ ವಿಶೇಷವಾದ ಅರಳಿ ಮರವೊಂದಿದೆ. ಇದನ್ನ ನೋಡಿಕೊಳ್ಳೋಕೆ ಇಲ್ಲಿನ ರಾಜ್ಯ ಸರ್ಕಾರ ವರ್ಷಕ್ಕೆ 12 ಲಕ್ಷ ರೂಪಾಯಿ ಖರ್ಚು ಮಾಡ್ತಿದೆ.
ಹೌದು. ಮಧ್ಯಪ್ರದೇಶ ರಜಧಾನಿ ಭೋಪಾಲ್ ಹಾಗೂ ವಿಧಿಶಾ ನಗರಗಳ ನಡುವೆ ಇರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಸಾಂಚಿ ಬುದ್ಧಿಸ್ಟ್ ಕಾಂಪ್ಲೆಕ್ಸ್ನಿಂದ 5 ಕಿ.ಮೀ ದೂರದಲ್ಲಿ ಈ ಅರಳಿ ಮರ ಇದೆ. ಈ ಮರಕ್ಕೆ ಪ್ರತಿನಿತ್ಯ ನೀರು ಹಾಕಲು ಹಾಗೂ ರಕ್ಷಣೆ ಮಡಲು ಮಧ್ಯಪ್ರದೇಶ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಿದೆ. ಈ ಮರದ ಕಾವಲಿಗಾಗಿ ನೇಮಿಸಲಾಗಿರುವ 4 ಸೆಕ್ಯೂರಿಟಿ ಗಾರ್ಡ್ಗಳು ಇಡೀ ದಿನ ಇದೇ ಪ್ರದೇಶದಲ್ಲಿ ಇರ್ತಾರೆ.
ಈ ಮರಕ್ಕಾಗಿ ನೀರು ಹಾಕಲೆಂದೇ ಪ್ರತ್ಯೇಕ ನೀರಿನ ಟ್ಯಾಂಕ್ ಇದೆ. ಮರದ ಆರೋಗ್ಯ ತಪಾಸಣೆ ಮಾಡಲು ಮಧ್ಯಪ್ರದೇಶದ ಕೃಷಿ ಇಲಾಖೆಯ ಸಸ್ಯವಿಜ್ಞಾನಿಯೊಬ್ಬರು ವಾರಕ್ಕೊಂದು ಬಾರಿ ಇಲ್ಲಿಗೆ ಭೇಟಿ ನೀಡ್ತಾರೆ.
ನನ್ನನ್ನು 2012ರ ಸೆಪ್ಟೆಂಬರ್ನಿಂದ ಇಲ್ಲಿ ನಿಯೋಜಿಸಲಾಗಿದೆ. ಇಲ್ಲಿ ನಾಲ್ಕು ಕಾವಲುಗಾರರಿದ್ದಾರೆ. ಮುಂಚೆ ಇಲ್ಲಿಗೆ ಸಾಕಷ್ಟು ಜನ ಬರುತ್ತಿದ್ದರು. ಈಗ ಇಲ್ಲಿಗೆ ಬರೋರು ತುಂಬಾ ಕಡಿಮೆ ಅಂತ ಇಲ್ಲಿನ ಹೋಮ್ ಗಾರ್ಡ್ಗಳಲ್ಲಿ ಒಬ್ಬರಾದ ಪರಮೇಶ್ವರ್ ತಿವಾರಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಅಂಥದ್ದೇನಪ್ಪಾ ಈ ಮರದ ವಿಶೇಷ ಅಂದ್ರಾ? 5 ವರ್ಷಗಳ ಹಿಂದೆ ಶ್ರೀಲಂಕಾ ರಾಷ್ಟ್ರಪತಿ ಮಹಿಂದ ರಾಜಪಕ್ಷ ಅವರು ಶ್ರೀಲಂಕಾದಿಂದ ಇದರ ಗಿಡವನ್ನು ತಂದು ಇಲ್ಲಿ ನೆಟ್ಟಿದ್ದರು. ಸಾಂಚಿಯ ಮಹಾಬೋಧಿ ಸೊಸೈಟಿ ಆಫ್ ಇಂಡಿಯಾದ ಭಂಟೆ ಚಂದರತನ್ ಈ ಮರದ ಹಿಂದಿನ ಪರಿಕಲ್ಪನೆಯ ಬಗ್ಗೆ ವಿವರಿಸಿದ್ದಾರೆ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಗೌತಮ ಬುದ್ಧ ಜ್ಞಾನೋದಯ ಪಡೆದ ಬೋಧಿ ವೃಕ್ಷದ ಕೊಂಬೆಯೊಂದನ್ನ ಭಾರತದಿಂದ ಶ್ರೀಲಂಕಾಗೆ ತೆಗೆದುಕೊಂಡು ಹೋಗಿ ಅಲ್ಲಿನ ಅನುರಾಧಾಪುರದಲ್ಲಿ ನೆಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ಆದ್ರೆ ಮಧ್ಯಪ್ರದೇಶದಲ್ಲಿ ಸಾಕಷ್ಟು ರೈತರು ಸಾಲಬಾಧೆ ತಾಳಲಾರದೆ ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ಒಂದು ಮರಕ್ಕಾಗಿ ಇಷ್ಟೊಂದು ಹಣ ಖರ್ಚು ಮಾಡುತ್ತಿರುವುದು ಸರಿಯೇ ಎಂದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ.
ಈ ಮರ ಇರುವ ಪ್ರದೇಶದಲ್ಲಿಯೇ ಸಾಂಚಿ ವಿಶ್ವವಿದ್ಯಾಲಯವನ್ನ 300 ಕೋಟಿ ರೂ ವೆಚ್ಛದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸದ್ಯಕ್ಕೆ ಬಾಡಿಗೆ ಕಟ್ಟಡವೊಂದರಲ್ಲಿ ವಿಶ್ವವಿದ್ಯಾಲಯವನ್ನ ನಡೆಸಲಾಗುತ್ತಿದ್ದು, ಈ ಕಟ್ಟಡಕ್ಕೆ ತಿಂಗಳಿಗೆ 20 ಲಕ್ಷ ರೂ. ಬಾಡಿಗೆ ನೀಡಲಾಗ್ತಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.