ಭೋಪಾಲ್: ಮಧ್ಯಪ್ರದೇಶದಲ್ಲಿ ಇನ್ನು ಮುಂದೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಜರಾತಿ ಹೇಳುವಾಗ `ಯಸ್ ಸಾರ್’ ಬದಲಿಗೆ `ಜೈ ಹಿಂದ್’ ಎಂದು ಹೇಳಲಿದ್ದಾರೆ.
ಮಂಗಳವಾರ ಚಿತ್ರಕೂಟದಲ್ಲಿ ಶಿಕ್ಷಕ, ಪ್ರಾಂಶುಪಾಲರ ವಿಭಾಗಿಯ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಶಿಕ್ಷಣ ಕುನ್ವಾರ್ ವಿಜಯ್ ಶಾ, ಅಕ್ಟೋಬರ್ 1 ರಿಂದ ಸತ್ನಾ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಹಾಜರಾತಿ ಹೇಳುವಾಗ ಯಸ್ ಸಾರ್, ಬದಲಿಗೆ `ಜೈ ಹಿಂದ್’ ಎಂದು ಹೇಳಬೇಕು ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಪ್ರಾಯೋಗಿಕವಾಗಿ ಈ ಬದಲಾವಣೆ ಸತ್ನಾ ಜಿಲ್ಲೆಯ ಶಾಲೆಗಳಲ್ಲಿ ಮಾತ್ರ ಜಾರಿ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜೈ ಹಿಂದ್ ಹೇಳುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮಕ್ಕಳು ದೇಶದ ಭವಿಷ್ಯ. ಅವರಲ್ಲಿ ದೇಶದ ಮೇಲೆ ಪ್ರೀತಿ ಗೌರವ ಹಾಗೂ ಭಕ್ತಿಯನ್ನು ಬೆಳಸಬೇಕು. ಆದ್ದರಿಂದ ಜೈ ಹಿಂದ್ ಹೇಳಬೇಕು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಮಧ್ಯಪ್ರದೇಶ ಸರ್ಕಾರವು ಈಗಾಗಲೇ ಶಾಲೆಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜ ಮತ್ತು ರಾಷ್ಟ್ರಗೀತೆಯನ್ನು ಹಾಡುವುದನ್ನು ಕಡ್ಡಾಯ ಮಾಡಿದೆ.
ಕುನ್ವಾರ್ ವಿಜಯ್ ಶಾ ಈ ಹಿಂದೆ ಸೆಲ್ಫಿ ತೆಗೆದುಕೊಳ್ಳುವ ವಿಚಾರದಲ್ಲೂ ಸುದ್ದಿಯಾಗಿದ್ದರು. 2015ರಲ್ಲಿ ಖಂಡ್ವಾ ಜಿಲ್ಲೆಯ ಹರ್ಷುದ್ ವಿಧಾನಸಭಾ ಕ್ಷೇತ್ರದ ಜನರು ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕಾದರೆ 10 ರೂಪಾಯಿ ಶುಲ್ಕ ನೀಡಬೇಕು ಎಂದು ಹೇಳಿದ್ದರು. ಸೆಲ್ಫಿಯಿಂದ ಬಂದ ಹಣವನ್ನು ಬುಡಕಟ್ಟು ಜನರ ವೃದ್ಧಾಶ್ರಮ ನಿರ್ಮಾಣಕ್ಕೆ ಬಳಸಲಾಗುವುದು ಎಂದು ತಿಳಿಸಿದ್ದರು. ಹಣ ನೀಡಲು ಸಾಧ್ಯವಿಲ್ಲದವರು ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಬಹುದು ಎಂದು ವಿಜಯ್ ಶಾ ಹೇಳಿದ್ದರು.