ಚಿತ್ರದುರ್ಗ: ಪ್ರೀತಿಗೆ ಕುಟುಂಬದಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹಿರಿಯೂರಿ ತಾಲೂಕಿನ ವಿ.ವಿ.ಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮಾನಸ(18) ಮತ್ತು ರಂಗಸ್ವಾಮಿ(19) ಆತ್ಮಹತ್ಯೆಗೆ ಶರಣಾಗಿರುವ ಪ್ರೇಮಿಗಳು. ಮಾನಸ ಮಾಯಾಸಂದ್ರ ಗ್ರಾಮದ ಗೊಲ್ಲ ಸಮುದಾಯದ ನಿಜಲಿಂಗಪ್ಪನವರ ಮಗಳಾಗಿದ್ದು, ರಂಗಸ್ವಾಮಿ ಭರಮಗಿರಿಯ ಕರಿಯಪ್ಪನವರ ಮಗ ಎನ್ನಲಾಗಿದೆ.
ಮಾನಸ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದರೆ, ರಂಗಸ್ವಾಮಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದನು. ಇಬ್ಬರ ವಯಸ್ಸು ಚಿಕ್ಕದಾಗಿದ್ದು, ಅಂತರ್ಜಾತಿಯ ಸಮಸ್ಯೆಯಿಂದಾಗಿ ಇವರ ಪ್ರೀತಿಗೆ ಎರಡು ಕುಟುಂಬಗಳಿಂದ ವಿರೋಧ ವ್ಯಕ್ತವಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ಕಾಲೇಜಿಗೆ ಹೋಗುತ್ತೇವೆ ಎಂದು ಹೇಳಿ ವಿ.ವಿ.ಪುರ ಅರಣ್ಯ ಪ್ರದೇಶಕ್ಕೆ ಹೋಗಿ ವಿಷಸೇವಿಸಿದ್ದಾರೆ.
ವಿಷಸೇವಿಸಿ ಒದ್ದಾಡುತ್ತಿದ್ದ ಪ್ರೇಮಿಗಳನ್ನು ಗಮನಿಸಿದ ದಾರಿಹೋಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಸಂಬಂಧ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.