ಚಿತ್ರದುರ್ಗ: ಲಾರಿ ಚಾಲಕನ ಅವಸರಕ್ಕೆ ತಂದೆಯ ಕಣ್ಣೆದುರೇ 7 ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ನಡೆದಿದೆ.
ವಾಸವಿ ಶಾಲೆಯ ಪೂರ್ಣ(7) ಮೃತ ಬಾಲಕಿ. ಅಪ್ಪನೊಂದಿಗೆ ಪೂರ್ಣ ಬೈಕ್ನಲ್ಲಿ ಶಾಲೆಗೆ ಹೋಗ್ತಿದ್ದ ವೇಳೆ ಓವರ್ ಟೇಕ್ ಮಾಡಲು ಹೋಗಿ ಬೈಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಚಕ್ರದ ಅಡಿಗೆ ಸಿಲುಕಿ ಬಾಲಕಿ ಅಪ್ಪಚ್ಚಿಯಾಗಿದ್ದಾಳೆ.
ಬಾಲಕಿ ಸಿದ್ದಾಪುರದಿಂದ ಅಪ್ಪನೊಂದಿಗೆ ಬೈಕ್ನಲ್ಲಿ ಚಳ್ಳಕೆರೆಯ ವಾಸವಿ ಶಾಲೆಗೆ ಹೋಗ್ತಿದ್ದಳು. ಅತ್ತ ಚಳ್ಳಕೆರೆ ಕಡೆಯಿಂದ ಬರುತ್ತಿದ್ದ ಲಾರಿ ಸಿದ್ದಾಪುರ ಸಮೀಪದ ಪೂಜಾ ಡಾಬ ಬಳಿ ಬೈಕಿಗೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸುರೇಶ್ ಅವರಿಗೂ ಕೂಡ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.