ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಭಿಕ್ಷುಕಿ ಮಹಿಳೆಯೊಬ್ಬರಿಗೆ ಆರ್ಥಿಕ ನೆರವು ನೀಡಿದ್ದಾರೆ.
ಕುಮಾರಸ್ವಾಮಿ ಶುಕ್ರವಾರ ಕುಮಟಾ ತಾಲೂಕಿನ ಮಾದನಗೇರಿಯ ಜೆಡಿಎಸ್ ಸಮಾವೇಶಕ್ಕೆ ತೆರಳಿದ್ದರು. ಈ ವೇಳೆ ಬಿಸಿಲಿನಲ್ಲಿ ಮಗುವನ್ನು ಎತ್ತಿಕೊಂಡು ಮಹಿಳೆಯೊಬ್ಬರು ಭಿಕ್ಷೆ ಬೇಡುತ್ತಿದ್ದರು. ಇದನ್ನು ಗಮನಿಸಿದ ಅವರಿಗೆ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸಂಜೆ ವೇಳೆಯಲ್ಲಿ ಗೋಕರ್ಣದಿಂದ ಕುಮಟಾಕ್ಕೆ ತಮ್ಮ ವಾಹನದಲ್ಲಿ ಹೋಗುವ ವೇಳೆ ಚಿಕ್ಕ ಮಗುವನ್ನು ಕಂಕುಳಲ್ಲಿ ಕಟ್ಟಿಕೊಂಡು ಭಿಕ್ಷೆ ಬೇಡುತಿದ್ದ ಮಹಿಳೆಯನ್ನು ಗಮನಿಸಿದ್ದಾರೆ. ನಂತರ ವಾಹನ ನಿಲ್ಲಿಸಿ ಮಹಿಳೆಯ ಕುಶಲೋಪರಿ ವಿಚಾರಿಸಿದ್ದಾರೆ. ನಂತರ ಮಹಿಳೆ ಶಿವಮೊಗ್ಗ ಮೂಲದ ಸಾಗರದವರು ಎಂಬುದು ತಿಳಿದು 10 ಸಾವಿರ ಹಣ ನೀಡಿ ಭಿಕ್ಷೆ ಬೇಡದೆ ಸ್ವಾಭಿಮಾನದಿಂದ ಬದುಕು ನಡೆಸುವಂತೆ ಸಲಹೆ ನೀಡಿದ್ದಾರೆ.
ಅಷ್ಟೇ ಅಲ್ಲದೇ ತಮ್ಮ ಪಕ್ಕದಲ್ಲಿದ್ದ ಸೊರಬ ಕ್ಷೇತ್ರದ ಶಾಸಕ ಮಧುಬಂಗಾರಪ್ಪನವರನ್ನು ಕರೆದು ಮಹಿಳೆಗೆ ಜೀವನ ನಡೆಸಲು ಗೂಡಂಗಡಿ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದ್ದಾರೆ.