ಚಾಮರಾಜನಗರ: ಪತಿರಾಯ ಎರಡು ಮಕ್ಕಳಾದ ನಂತರ ಮೊದಲ ಹೆಂಡತಿಗೆ ಕೈಕೊಟ್ಟು ಅಪ್ರಾಪ್ತೆಯನ್ನು ಮದುವೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ರವಿಕುಮಾರ್ (45) ಎಂಬಾತನೇ ಆಪ್ರಾಪ್ತ ಬಾಲಕಿಯನ್ನು ಮದುವೆಯಾದ ವ್ಯಕ್ತಿ. ರವಿಕುಮಾರ್ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕೆಎಸ್ಆರ್ ಟಿಸಿ ನಿಗಮದಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ರವಿಕುಮಾರ್ 2003 ರಲ್ಲಿ ಪದ್ಮಾವತಿ ಎಂಬವರನ್ನು ಮೊದಲ ಮದುವೆಯನ್ನು ಗುರು ಹಿರಿಯರ ಸಮ್ಮುಖದಲ್ಲಿಯೇ ಆಗಿದ್ದನು. ಇಬ್ಬರ ಮದುವೆ ಸಾಕ್ಷಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಆದರೆ ರವಿಕುಮಾರ್ ಇತ್ತೀಚೆಗೆ ಯಾರಿಗೂ ಗೊತ್ತಾಗದಂತೆ 16 ವರ್ಷದ ನಿತ್ಯಶ್ರೀ (ಹೆಸರು ಬದಲಾಯಿಸಿದೆ) ಎಂಬ ಬಾಲಕಿಯನ್ನು ಮದುವೆ ಆಗಿದ್ದಾರೆ. ನಿತ್ಯಶ್ರೀ ಗುಂಡ್ಲುಪೇಟೆ ತಾಲೂಕಿನ ಬೋಗಯ್ಯನ ಹುಂಡಿ ನಿವಾಸಿಯಾಗಿದ್ದು, ನಂಜನಗೂಡಿನ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ.
ಪತಿಯ ಎರಡನೇ ಮದುವೆ ವಿಷಯ ತಿಳಿದ ಮೊದಲ ಪತ್ನಿ ಪದ್ಮಾವತಿ ಅವರು ಮೈಸೂರು ನಗರ ಕಮಿಷನರ್ ಬಳಿ ದೂರು ಸಲ್ಲಿಸಿದ್ದಾರೆ.