ಬೆಂಗಳೂರು: ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಡಾಲರ್ಸ್ ಕಾಲೋನಿಯ ಕೆ.ಪಿ.ನಂಜುಂಡಿ ನಿವಾಸಕ್ಕೆ ಬಿಎಸ್ವೈ ಭೇಟಿ ನೀಡಿ ಮಾತುಕತೆಯ ಬಳಿಕ ವಿಶ್ವಕರ್ಮ ಸಮುದಾಯದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಬಿಜೆಪಿ ಪಕ್ಷ ಸೇರಿದ್ದಾರೆ.
ಬಳಿಕ ಮಾತನಾಡಿದ ಅವರು, ಕಳೆದ 16 ವರ್ಷಗಳಿಂದ ನಾನು ಕಾಂಗ್ರೆಸ್ನಲ್ಲಿದ್ದೆ. ಆದರೆ ಈಗ ಬಿಜೆಪಿ ಸೇರುತ್ತಿದ್ದೇನೆ. 16 ವರ್ಷದಲ್ಲೇ ಏನನ್ನೂ ನಾನು ಬಯಸಿಲ್ಲ. ಇಂದು ಬಿಜೆಪಿಗೆ ಸೇರಿ, ಈಗಲೇ ಏನನ್ನು ಕೇಳುವುದಿಲ್ಲ. ಬಿಜೆಪಿಯಲ್ಲಿ ನಾನು ಒಬ್ಬ ಸಾಮಾನ್ಯ ಅಟೆಂಡರ್ ಆಗಿ ಕೆಲಸ ಮಾಡಲು ಸಿದ್ಧ ಅಂತಾ ಹೇಳಿದ್ದಾರೆ.
ಯಾವುದೇ ಬೇಡಿಕೆಗಳನ್ನು ಪಕ್ಷದ ಮುಂದೆ ಇಡದೇ ಬಿಜೆಪಿಗೆ ಸೇರುತ್ತಿದ್ದೇನೆ. ಯಡಿಯೂರಪ್ಪ ಮಾತು ಕೊಟ್ಟರೇ ಸತ್ಯ ಹರಿಶ್ಚಂದ್ರ ಮಾತು ಕೊಟ್ಟಂತೆ. ಅವರು ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದ್ದಾರೆ ಎಂದು ನಂಜುಂಡಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಮಾತನಾಡಿ, ಈ ಕ್ಷಣದಿಂದಲೇ ನಂಜುಂಡಿ ಬಿಜೆಪಿ ಸೇರಿದ್ದಾರೆ. ಮುಂದಿನ ಚುನಾವಣೆ ಬಳಿಕ ನಂಜುಂಡಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ಯಾವುದೇ ಬೇಡಿಕೆಯನ್ನು ಇಡದೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ. ಅವರ ಅಧಿಕೃತ ಬಿಜೆಪಿ ಸೇರ್ಪಡೆ ಕೆಲಸ ಎರಡ್ಮೂರು ದಿನಗಳಲ್ಲಿ ಆಗುತ್ತೆ. ಇನ್ಮುಂದೆ ವಿಶ್ವಕರ್ಮ ಸಮುದಾಯ ನಮ್ಮ ಜೊತೆಗೆ ಇರಲಿದೆ ಅಂತಾ ಹರ್ಷ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ನಮ್ಮ ಸಮಾಜವನ್ನು ಕಡೆಗಣಿಸಿ ಹೇಗೆ ಪಕ್ಷ ಬೆಳೆಸುತ್ತೀರಿ : ಸಿಎಂಗೆ ನಂಜುಂಡಿ ಸವಾಲು