ಕೊಪ್ಪಳ: ಶಾಸಕ ಶಿವರಾಜ್ ತಂಗಡಗಿ ಅವರ ಬೆಂಬಲಿರೊಬ್ಬರು ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ, ಅಧಿಕಾರಿ ಮೇಲೆ ಕೈ ಮಾಡಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ಇದೀಗ ಈ ಘಟನೆಯ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಗಂಗಾವತಿಯ ನವಲಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಸಹಾಯಕ ಅಧಿಕಾರಿ ದೇವೇಂದ್ರಪ್ಪ ಅವರ ಮೇಲೆ ಏಪ್ರಿಲ್ 11 ರಂದು ಕಾಂಗ್ರೆಸ್ ಮುಖಂಡ ಜಡಿಯಪ್ಪ ಹಲ್ಲೆ ಮಾಡಿದ್ದರು. ಘಟನೆ ನಡೆದ ದಿನ ಆರೋಪಿ ಜಡಿಯಪ್ಪ ಹಲ್ಲೆ ಆರೋಪವನ್ನು ಅಲ್ಲಗಳೆದಿದ್ದರು. ಆದ್ರೆ ಇದೀಗ ಪಬ್ಲಿಕ್ ಟಿವಿ ಗೆ ಲಭ್ಯವಾದ ವಿಡಿಯೋದಲ್ಲಿ ಜಡಿಯಪ್ಪ ಕೃಷಿ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರೋದು, ಇಡೀ ಕಚೇರಿ ತುಂಬಾ ಓಡಾಡಿ ದಾಂಧಲೆ ಮಾಡುತ್ತಾ ಹಲ್ಲೆ ಮಾಡಿರೋದು ದಾಖಲಾಗಿದೆ.
ಹಲ್ಲೆ ಸಂಬಂಧ ಕನಕಗಿರಿ ಠಾಣೆಗೆ ಹಲ್ಲೆಗೆ ಒಳಗಾಗಿದ್ದ ಅಧಿಕಾರಿ ದೂರು ನೀಡಿದ್ರು. ಕೃಷಿ ಹೊಂಡದ ಬಿಲ್ ನೀಡುವ ವಿಚಾರವಾಗಿ ಜಡಿಯಪ್ಪ ಮತ್ತು ಕೃಷಿ ಅಧಿಕಾರಿ ದೇವೇಂದ್ರಪ್ಪ ನಡುವೆ ವಾಗ್ವಾದ ನಡೆದಿತು. ಈ ವೇಳೆ ಹಲ್ಲೆ ಮಾಡಲಾಗಿದ್ದು, ಜಡಿಯಪ್ಪ ಹಾಗೂ ಇತರರು ನನ್ನ ಮೇಲೆ ಚಪ್ಪಲಿ ಹಾಗೂ ಕಟ್ಟಿಗೆಯಿಂದ ಹಲ್ಲೆ ಮಾಡಿ ಇಲಾಖೆಯ ಸಿಮ್ ಇರುವ ಮೊಬೈಲ್ ಕಸಿದುಕೊಂಡು ಜೀವ ಬೆದರಿಕೆ ಹಾಕಿದ್ರು ಎಂದು ದೇವೇಂದ್ರಪ್ಪ ದೂರಿನಲ್ಲಿ ತಿಳಿಸಿದ್ದರು. ಘಟನೆಯಲ್ಲಿ ಕೃಷಿ ಅಧಿಕಾರಿಯ ಹಲ್ಲು ಮುರಿದಿತ್ತು.
ಆದ್ರೆ ಈವರೆಗೂ ಜಡಿಯಪ್ಪ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ಇದಕ್ಕೆ ಬೆದರಿಕೆ ತಂತ್ರವಾಗಿ ಏಪ್ರಿಲ್ 11ರಂದು ರಾತ್ರಿಯೇ ಹಲ್ಲೆಗೊಳಗಾಗಿದ್ದ ಅಧಿಕಾರಿ ಮೇಲೆಯೇ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ಜಡಿಯಪ್ಪ ಪತ್ನಿ ಬಿಜೆಪಿಯಿಂದ ತಾಲೂಕು ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಆದ್ರೆ ಜಡಿಯಪ್ಪ ಇತ್ತೀಚೆಗೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಶಾಸಕ ಶಿವರಾಜ ತಂಗಡಗಿಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು.