ಕೊಪ್ಪಳ: ವಿಶ್ವ ಪ್ರಸಿದ್ಧ ಅಂಜನಾದ್ರಿ ಪರ್ವತದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಾಬಾರನ್ನು ಈಗ ಅರ್ಚಕ ಸ್ಥಾನದಿಂದ ಕೆಳಗಿಳಿಸಲು ಟ್ರಸ್ಟ್ ನಿರ್ಣಯ ಕೈಗೊಂಡಿದೆ.
ಕೊಪ್ಪಳದ ಗಂಗಾವತಿ ಅಂಜನಾದ್ರಿ ಪರ್ವತಕ್ಕೆ ಇತ್ತೀಚೆಗೆ ದೇಶ ವಿದೇಶದಿಂದ ಅಸಂಖ್ಯಾತ ಭಕ್ತರು ಆಗಮಿಸುತ್ತಿದ್ದು, ದೇವಾಲಯಕ್ಕೆ ಆಗಮಿಸುವ ಮಹಿಳಾ ಭಕ್ತರ ಜೊತೆ ವಿದ್ಯಾದಾಸ ಬಾಬಾ ಅಸಭ್ಯವಾಗಿ ವರ್ತಿಸ್ತಿದ್ದಾರೆ. ಜೊತೆಗೆ ಅನೈತಿಕ ಚಟುವಟಿಕೆ ಗಳಿಗೆ ಅರ್ಚಕರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಲ್ಲದೇ ದೇವಾಲಯದ ಸುತ್ತಮುತ್ತಲಿನ ಭಕ್ತರೊಂದಿಗೂ ಅಸಭ್ಯ ವರ್ತಿಸುತ್ತಿದ್ದು, ವಿನಾಕಾರಣ ಜಗಳವಾಡುತ್ತಾರೆ ಎಂದು ಆರೋಪಿಸಲಾಗಿದೆ.
ಭಕ್ತರಿಂದ ದೇವಾಲಯಕ್ಕೆ ಇಲ್ಲಿಯವರೆಗೆ ಲಕ್ಷಾಂತರ ರೂ. ಹಣ ದೇಣಿಗೆಯಾಗಿ ಬಂದಿದೆ. ಆದರೆ ವಿದ್ಯಾದಾಸ ಬಾಬಾ ಲೆಕ್ಕ ನೀಡುತ್ತಿಲ್ಲ. ಇದರಿಂದ ಅಂಜನಾದ್ರಿ ಪರ್ವತ ಚಾರಿಟೇಬಲ್ ರಿಲಿಜಿಯಿಸ್ ಟ್ರಸ್ಟ್ ಸದಸ್ಯರು ಸಭೆ ಸೇರಿ ಅರ್ಚಕರ ನಡೆಯನ್ನು ಖಂಡಿಸಿದ್ದಾರೆ. ಇದೀಗ ವಿದ್ಯಾದಾಸ ಬಾಬಾರನ್ನು ಅರ್ಚಕ ಹುದ್ದೆಯಿಂದ ಕೆಳಗಿಳಿಸಿ ಬ್ರಾಹ್ಮಣ ಪಂಡಿತರೊಬ್ಬರನ್ನು ಅರ್ಚಕರನ್ನಾಗಿ ನೇಮಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ವಿದ್ಯಾದಾಸ ಬಾಬಾ 2009 ರಲ್ಲಿ ಪ್ರಧಾನ ಅರ್ಚಕರಾಗಿ ನೇಮಕಗೊಂಡಿದ್ದರು. ಈಗಾಗಲೇ ದೇವಾಲಯದ ಪೂಜಾ ವಿಷಯವಾಗಿ ತುಳಸಿದಾಸಬಾಬಾ, ವಿದ್ಯಾದಾಸಬಾಬಾ ನಡುವೆ ಕಲಹ ಏರ್ಪಟಿದ್ದು, ಈ ಕುರಿತು ಕೋರ್ಟ್ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಪ್ರಸ್ತುತ ವಿದ್ಯಾದಾಸಬಾಬಾರನ್ನು ಪ್ರಧಾನ ಅರ್ಚಕ ಹುದ್ದೆಯಿಂದ ಕೆಳಗಿಳಿಸಿದ್ದರಿಂದ ಪೂಜಾ ವಿವಾದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತಾಗಿದೆ.
https://www.youtube.com/watch?v=6ddrM4Fje_M