ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನನ್ನನ್ನು ಬಳಸಿಕೊಂಡು ಬಿಸಾಕಿದ್ದಾರೆ. ಶೋಭಾ ಕರಂದ್ಲಾಜೆಯಿಂದ ಜೀವ ಬೆದರಿಕೆ ಇದೆ ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಗಳಗಳನೇ ಅತ್ತ ಪ್ರಸಂಗ ಬಾಗಲಕೋಟೆಯಲ್ಲಿ ನಡೆದಿದೆ.
2018ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪದ್ಮನಾಭ ಪ್ರಸನ್ನ, ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ನನಗೆ ಮೋಸ ಮಾಡಿದ್ದಾರೆ ಎಂದು ಗಳ ಗಳನೇ ಕಣ್ಣೀರು ಹಾಕಿದರು.
ಇದೇ ವೇಳೆ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಇಬ್ಬರೂ ಕೇರಳದ ಚೋಟಾಡಿಕೆರೆ ಭಗವತಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಮದುವೆಯ ಸಿಡಿ ನನ್ನ ಬಳಿ ಇದೆ. ಸಿಡಿಯಲ್ಲಿ ಮದುವೆ ವಿಷಯ ಬಿಟ್ಟು ಬೇರೇನೂ ಇಲ್ಲ. ಸಮಯ ಬಂದಾಗ ಆ ಸಿಡಿ ಬಿಡುಗಡೆ ಮಾಡುತ್ತೇನೆ ಎಂದರು.
ಬಿಎಸ್ವೈ ಸಿಡಿ ವಿಚಾರವಾಗಿ ಈಗಾಗಲೇ ನನ್ನ ಮೇಲೆ ಹಲ್ಲೆ ನಡೆದಿದೆ. ಶೋಭಾ ಕರಂದ್ಲಾಜೆಯಿಂದ ನನಗೆ ಜೀವ ಬೆದರಿಕೆ ಇದೆ, ಇದರಿಂದಲೇ ನಾನು ಸಿಡಿ ಬಿಡುಗಡೆ ಮಾಡಿಲ್ಲ. ಅಲ್ಲದೇ ಈಗಾಗಲೇ ತನಗೆ ಭದ್ರತೆ ನೀಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಕೊಟ್ಟಿದ್ದೇನೆ. ಸೂಕ್ತ ಭದ್ರತೆ ಕೊಟ್ಟರೆ ನಾನು ಸಿಡಿ ಬಿಡುಗಡೆ ಮಾಡುವೆ ಅಂತಾ ತಮ್ಮ ಹೇಳಿಕೆಯನ್ನು ಪುನರಚ್ಚಿಸಿದ್ದಾರೆ.
ನಾನು ಬ್ಲಾಕ್ ಮೇಲ್ ಮಾಡುವ ವ್ಯಕ್ತಿ ಅಲ್ಲ, ಯಡಿಯೂರಪ್ಪ ಅವರ ಮೇಲೆ ನನಗೆ ವಯಕ್ತಿಕ ದ್ವೇಷವಿಲ್ಲ. ಶೋಭಾ ಕರಂದ್ಲಾಜೆ ಕೆಜೆಪಿ ಪಕ್ಷ ಇಷ್ಟೆಲ್ಲ ಹಾಳಾಗಲು ಕಾರಣ, ಅವರೇ ಎಲ್ಲದಕ್ಕೂ ಕಿಂಗ್ಪಿನ್ ಎಂದು ಆರೋಪಿಸಿದರು. ಆದರೆ ಸುದ್ದಿಗೋಷ್ಠಿ ವೇಳೆ ಸಿಡಿ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ಪದ್ಮನಾಭ ಪ್ರಸನ್ನ ಕಕ್ಕಾಬಿಕ್ಕಿಯಾದರು. ನಾನು ಸಿಡಿ ವಿಚಾರವನ್ನು ಪ್ರಸ್ತಾಪವೇ ಮಾಡಿಲ್ಲ. ಸಿಎಂ ಅವರಿಗೆ ಭದ್ರತೆ ಕೋರಿ ಪತ್ರ ಬರೆದಿದ್ದೇನೆ ಅಂತಾ ಅಂದ್ರು.