ಕೊಚ್ಚಿ: ತಂದೆ-ತಾಯಿ ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಾ ಕುಳಿತಿದ್ದ ವೇಳೆ ಮಗುವೊಂದು ಆಟವಾಡಲು ತೆರಳಿ ಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಸೋಮವಾರ ಈ ಘಟನೆ ನಡೆದಿದ್ದು, ಮಗುವನ್ನು ಪನಂಗಾಡ್ ನಿವಾಸಿ ಉಮೇಶ್ ಎಂಬವರ ಪುತ್ರ ಸಬರಿನಾಥ್(2) ಎಂಬುವುದಾಗಿ ಗುರುತಿಸಲಾಗಿದೆ.
ಏನಿದು ಘಟನೆ?: ಮಗುವಿನ ಪೋಷಕರು ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದರು. ಪೋಷಕರು ತೊಡೆಯಲ್ಲಿ ಸಬರಿನಾಥನು ಕುಳಿತಿದ್ದನು. ಇದ್ದಕ್ಕಿದ್ದಂತೆಯೇ ಸುಮಾರು 6 ಗಂಟೆಯ ಸುಮಾರಿಗೆ ಆಟವಾಡಲೆಂದು ಹೋದ ಮಗು ಕೆಲ ಹೊತ್ತು ಒಳಗೆ ಬಾರದೇ ಇರುವುದನ್ನು ಗಮನಿಸಿದ ಪೋಷಕರು ಮಗುವನ್ನು ಸುತ್ತಮುತ್ತ ಹುಡುಕಾಡಿದ್ದಾರೆ. ಅಲ್ಲದೇ ಸ್ಥಳೀಯ ನಿವಾಸಿಗಳು ಕೂಡ ಹುಡುಕಾಟ ಆರಂಭಿಸಿದ್ದರು. ಆದ್ರೆ ಮಗುವಿನ ಸುಳಿವೇ ಇರಲಿಲ್ಲ. ಕೊನೆಗೆ ಮನೆಯ ಹತ್ತಿರವೇ ಇದ್ದ ಕೊಳದಲ್ಲಿ ಮಗು ಒದ್ದಾಡುತ್ತಿರುವುದನ್ನು ಕಂಡ ಸ್ಥಳೀಯರು ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಮಗುವನ್ನು ಕೊಳದಿಂದ ಹೊರತೆಗೆದ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಮಗು ಮೃತಪಟ್ಟಿದೆ ಅಂತಾ ವೈದ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಕ್ಕಳನ್ನು ಹೆತ್ತವರು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಹಾಗೂ ಮಕ್ಕಳು ತಮ್ಮ ಕಣ್ಣ ಮುಂದೆಯೇ ಆಟವಾಡುತ್ತಿರುವಂತೆ ನೋಡಿಕೊಳ್ಳಬೇಕು ಅಂತಾ ಪೊಲೀಸರು ತಿಳಿಸಿದ್ದಾರೆ.