ತಿರುವನಂತಪುರಂ: ಹೊಸ ಕಾರನ್ನ ಅತೀ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಪರಿಣಾಮ ಅಪಘಾತ ಸಂಭವಿಸಿ ಉದ್ಯಮಿಯ ಮಗನೊಬ್ಬ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
ಇಲ್ಲಿನ ತಿರುವನಂತಪುರಂನಲ್ಲಿ ಕಳೆದ ರಾತ್ರಿ 10.45ರ ಸುಮಾರಿನಲ್ಲಿ ಈ ಘಟನೆ ನಡೆದಿದೆ. ಉದ್ಯಮಿ ಸುಬ್ರಮಣ್ಯ ಎಂಬವರ ಮಗ ಆದರ್ಶ್ ಹೊಚ್ಚ ಹೊಸ ಸ್ಕೋಡಾ ಕಾರನ್ನ ವೇಗವಾಗಿ ಚಾಲನೆ ಮಾಡಿದ್ದು, ಆಟೋಗೆ ಗುದ್ದಿದೆ. ನಂತರ ನಿಯಂತ್ರಣ ತಪ್ಪಿ ಕಾರ್ ಅಪಘಾತಕ್ಕೀಡಾಗಿದೆ.
ಕಾರಿನಲ್ಲಿದ್ದ ಮಹಿಳೆಯರಿಗೆ ಗಾಯವಾಗಿದ್ದು, ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಅಪಘಾತದಿಂದಾಗಿ ಸ್ಕೋಡಾ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ವಾಹನವನ್ನ ಕಟ್ ಮಾಡಿ ಒಳಗಿದ್ದ ಪ್ರಯಾಣಿಕರನ್ನ ರಕ್ಷಣೆ ಮಡಿದ್ದಾರೆ.
ಕಾರಿಗೆ ತಾತ್ಕಾಲಿಕ ರೆಜಿಸ್ಟ್ರೇಷನ್ ಇತ್ತು. ಅಪಘಾತದಲ್ಲಿ 20 ವರ್ಷದ ಆದರ್ಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆಂದು ಪೊಲೀಸರು ಹೇಳಿದ್ದಾರೆ.