ಬಳ್ಳಾರಿ: ಅಂದು ಅವರಿಬ್ಬರ ಮಧ್ಯೆ ಬಿಡಿಸಲಾಗದ ದೋಸ್ತಿಯಿತ್ತು. ಆದ್ರೆ ಇಂದು ಕರುಣಾಕರರೆಡ್ಡಿ ಆತ್ಮೀಯ ಗೆಳೆಯ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ.
ಗೆಳತನಕ್ಕಾಗಿ ಸರ್ಕಾರವನ್ನೆ ಅಲ್ಲಾಡಿಸಿದ್ದ ರೆಡ್ಡಿ ರಾಮುಲು ಸಹೋದರರ ಮಧ್ಯೆ ಇದೀಗ ಎಲ್ಲವೂ ಸರಿಯಿಲ್ಲ ಅನ್ನೋದು ತಿಳಿದುಬಂದಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಶ್ರೀರಾಮುಲು ವಿರುದ್ಧ ಮಾಜಿ ಸಚಿವ ಕರುಣಾಕರರೆಡ್ಡಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಬಳ್ಳಾರಿಯ ಸುಷ್ಮಾ ಸ್ವರಾಜ್ ಕಾಲೋನಿಯಲ್ಲಿ ಸಂಸದ ಶ್ರೀರಾಮುಲು ಹಾಗೂ ಕರುಣಾಕರರೆಡ್ಡಿ ಒಂದಾಗಿ ಖರೀದಿಸಿದ್ದ 10 ಎಕರೆ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಕರುಣಾಕರರೆಡ್ಡಿ ಬಳ್ಳಾರಿಯ ಸಿಜೆಎಂ ನ್ಯಾಯಾಲಯದಲ್ಲಿ ಆಸ್ತಿ ಮಾಲಿಕತ್ವದ ದಾವೆ ಹೂಡಿದ್ದಾರೆ.
ಕರುಣಾಕರರೆಡ್ಡಿ ದೂರಿನ ಹಿನ್ನಲೆಯಲ್ಲಿ ನ್ಯಾಯಾಲಯ ಆಸ್ತಿ ಮಾಲೀಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮೂವರಿಗೆ ಸಮನ್ಸ್ ಜಾರಿ ಮಾಡಿದೆ. ಸಂಸದ ಶ್ರೀರಾಮುಲು, ಕೆ ತಿಮ್ಮರಾಜು ಹಾಗೂ ರಾಘವೇಂದ್ರ ಎಂಬವರಿಗೆ ಸಮನ್ಸ್ ಜಾರಿಯಾಗಿದೆ. ಹೀಗಾಗಿ ರೆಡ್ಡಿ ರಾಮುಲು ಸಹೋದರ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ದೃಢಪಟ್ಟಿದೆ.