ಮೈಸೂರು: ಸಹಕಾರ ಬ್ಯಾಂಕ್ ಗಳ ಮೂಲಕ ರೈತರು ಪಡೆದಿರುವ ಸಾಲನ್ನು ರಾಜ್ಯ ಸರ್ಕಾರ ಮನ್ನಾ ಮಾಡಬಹುದು. ಆದರೆ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ಗಳ ಮೂಲಕ ಪಡೆದಿರುವ 42 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವವರು ಯಾರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕ್ ಗಳ ಮೂಲಕ ರೈತರು ಪಡೆದಿರುವ ಸಾಲವನ್ನು ಕೇಂದ್ರ ಸರ್ಕಾರವೇ ಮನ್ನಾ ಮಾಡಬೇಕು.
ಉತ್ತರ ಪ್ರದೇಶದಲ್ಲಿ ಸರ್ಕಾರ ಮನ್ನಾ ಮಾಡಿದೆಯಲ್ಲವೇ ಎಂದು ಪ್ರಶ್ನೆ ಕೇಳಿದ್ದಕ್ಕೆ, ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಪಡೆದ ಸಾಲವನ್ನು ಇದೂವರೆಗೂ ಯಾರೂ ಎಲ್ಲೂ ಮನ್ನಾ ಮಾಡಿಲ್ಲ ಎಂದು ತಿಳಿಸಿ ಹೊರಟುಬಿಟ್ಟರು.
ನಂಜನಗೂಡಿನ ಹೊರಳವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ತೆರಿಗೆ ಹಣವನ್ನು ತಂದು ಸರ್ಕಾರ ಉಪ ಚುನಾವಣೆ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಆ ರೀತಿ ಮಾಡಲು ಸಾಧ್ಯವೇ? ಆ ರೀತಿ ಹಣ ಖರ್ಚು ಮಾಡಿದರೆ ಚುನಾವಣಾ ಆಯೋಗ ಗಮನಿಸಿ ಕ್ರಮ ಕೈಗೊಳ್ಳುವುದಿಲ್ಲವೇ? ಬಿಜೆಪಿಯವರು ಮಾಡುವುದನ್ನು ನಮಗೆ ಹೇಳುತ್ತಿದ್ದಾರೆ ಎಂದರು.
ಬಿಎಸ್ವೈ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಬರಿ ಒಣಜಂಬ ಹಾಗೂ ಬುರುಡೆ ಬಿಡುತ್ತಿದ್ದಾರೆ. ಯಾರ ಮುಖ ನೋಡಿಕೊಂಡು ಮತ ಹಾಕುತ್ತಾರೆ ಅಂತ ಚುನಾವಣೆಯಲ್ಲಿ ತಿಳಿಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಉತ್ತರಪ್ರದೇಶದಲ್ಲಿ ರೈತರ ಸಾಲ ಮನ್ನಾ: ಕರ್ನಾಟಕದಲ್ಲಿ ಆಗುತ್ತಾ?