ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರು ಬಾರ್ ನಲ್ಲಿ ಕುಡಿದು ಮಾತನಾಡುವ ಹಾಗೇ ಮಾತನಾಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸುವ ವೇಳೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಅಪ್ಪನ ಮೇಲೆ ಆಣೆ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದರು. ಸಿಎಂ ಬಾರ್ ನಲ್ಲಿ ಕುಳಿತು ಮಾತನಾಡಿದಂತೆ ಮಾತನಾಡುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯಾಗಿ ಮಾತನಾಡಲ್ಲ. ಈ ರೀತಿ ಮಾತನಾಡುವುದನ್ನು ಮೊದಲು ಅವರು ನಿಲ್ಲಿಸಬೇಕು ಎಂದು ಟಾಂಗ್ ನೀಡಿದರು.
ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಮಾಡಿದಷ್ಟು ಕಾಂಗ್ರೆಸ್ ಪಕ್ಷ ಕುಸಿಯುತ್ತ ಹೋಗುತ್ತೆ. ರಾಹುಲ್ ಪ್ರಚಾರದಿಂದ ಜನಾಕರ್ಷಣೆ ಆಗುವುದಿಲ್ಲ. ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗುವುದಿಲ್ಲ. ಕೋಲಾರ, ಚಿಕ್ಕಬಳ್ಳಾಪುರ ದಲ್ಲಿ ಜನರು ಸೇರಿಲ್ಲ. ಜನತೆಗೆ ರಾಷ್ಟ್ರೀಯ ಪಕ್ಷಗಳ ನಾಯಕರ ಮೇಲಿನ ವಿಶ್ವಾಸ ಹಾಗೂ ಆಕರ್ಷಣೆ ಕಡಿಮೆಯಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಸ್ವಂತ ರಾಮನಗರಕ್ಕೆ ಬಂದು ಪ್ರಚಾರ ಮಾಡಿದ್ರೂ ನಾನು ಗಾಬರಿಯಾಗಲ್ಲ. ಇದಕ್ಕೆ ರಾಮನಗರ ಜನರು ಉತ್ತರ ಕೊಡುತ್ತಾರೆ. ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಮಾತೆ ಮಹಾದೇವಿಗೆ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಬೀಳುವುದಿಲ್ಲ. ಜೆಡಿಎಸ್ ಗೆ ಪರವಾಗಿ ಮತ ನೀಡುತ್ತಾರೆ. ಎಂದರು.
ಕೇಂದ್ರ ಸರ್ಕಾರದ ಆಡಳಿತ ನೋಡಿದ ಜನರು ಅಲ್ಲದೇ ಪ್ರಾಣಿಗಳು ಕೂಡ ಅವರ ವಿರುದ್ಧ ಹೋರಾಟ ಮಾಡುವ ಭಾವನೆ ಮೂಡಿದೆ. ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿ ಆಡಳಿತ ನೋಡಿ ಪ್ರಾಣಿಗಳಿಗೆ ಬೇಸರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಅವರಿಗೆ ಟಾಂಗ್ ನೀಡಿದರು. ಶಾಸಕ ಸಿಪಿ ಯೋಗಿಶ್ವರ್ ಗೆ ನೋಟಿಸ್ ನೀಡಿರುವ ಕುರಿತು, ಅವರು ಏನು? ಉತ್ತರ ನೀಡುತ್ತಾರೆ ನೋಡೋಣ, ಯಾರು ಬೇನಾಮಿ, ಸ್ವನಾಮೀ ಆಸ್ತಿ ಮಾಡಿಕೊಂಡಿದ್ದಾರೆ ಎಂಬುವುದು ತಿಳಿಯುತ್ತದೆ ಎಂದು ಹೇಳಿದರು.