ಶಿವಮೊಗ್ಗ: ಪುರಾಣ ಪ್ರಸಿದ್ಧ ಯಾತ್ರ ಸ್ಥಳ ಕೊಡಚಾದ್ರಿಗೆ ಹೋಗುವಾಗ ಜೀಪ್ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತ ಮಹಿಳೆಯನ್ನು ಕೇರಳ ತ್ರಿಶ್ಯೂರ್ ಮೂಲದ 38 ವರ್ಷದ ಸರಿತಾ ಎಂದು ಗುರುತಿಸಲಾಗಿದೆ. ಜೀಪಿನಲ್ಲಿ ಇದ್ದ ಇನ್ನಿತರರಿಗೆ ಗಾಯಗಳಾಗಿದ್ದು, ಅವರನ್ನು ಕುಂದಾಪುರ ಆಸ್ಪತ್ರೆಗೆ ಸೇರಿಸಲಾಗಿದೆ
ಕೇರಳದಿಂದ ಬಂದಿದ್ದ ಎಂಟು ಜನ ಯಾತ್ರಿಕರು ಇದ್ದ ಈ ಜೀಪ್ ಕೊಡಚಾದ್ರಿಯ ದುರ್ಗಮ ಮಾರ್ಗದಲ್ಲಿ ಹತ್ತುವಾಗ ಆಕ್ಸಲ್ ಕಟ್ಟಾಗಿದೆ. ಇದರಿಂದಾಗಿ ಜೀಪ್ ನಿಯಂತ್ರಣ ತಪ್ಪಿದಾಗ ಮುಂದಿನ ಸೀಟಿನಲ್ಲಿ ಕೂತಿದ್ದ ಮಹಿಳೆ ಕೆಳಗೆ ಉರುಳಿ, ಅವರ ಮೇಲೆ ಜೀಪು ಪಲ್ಟಿಯಾಗಿ ಬಿದ್ದಿದೆ.
ಕೊಲ್ಲೂರಿಗೆ ಬಂದು ಮೂಕಾಂಬಿಕೆ ದರ್ಶನ ಪಡೆದು ಅಲ್ಲಿಂದ ಹೊಸನಗರ ತಾಲೂಕಿನಲ್ಲಿರುವ ಕೊಡಚಾದ್ರಿಯ ತುದಿಯಲ್ಲಿ ಇರುವ ಸರ್ವಜ್ಞ ಪೀಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವುದು ವಾಡಿಕೆ.
ಈ ಮಾರ್ಗ ಅತ್ಯಂತ ದುರ್ಗಮವಾಗಿದ್ದು, ಜೀಪು ಸೇರಿ ಯಾವುದೇ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೆ, ಅರಣ್ಯ ಇಲಾಖೆ ಜೀಪ್ ಮಾಲೀಕರಿಂದ ಹಣ ಕಟ್ಟಿಸಿಕೊಂಡು ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಹಲವು ಬಾರಿ ಈ ರೀತಿಯ ಅವಘಡಗಳು ನಡೆದಿದ್ದರೂ, ಪ್ರಾಣಾಪಾಯ ಸಂಭವಿಸಿರಲಿಲ್ಲ. ಈಗ ಜೀಪ್ ಚಾಲಕರ ಹಣದಾಸೆ ಹಾಗೂ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಯಾತ್ರೆಗೆ ಬಂದಿದ್ದ ಮಹಿಳೆ ಜೀವ ಬಲಿ ಪಡೆದಿದೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಘಟನೆ ನಡೆದಿದೆ.