ಬೆಂಗಳೂರು: ಜೆಡಿಎಸ್ ರೆಬಲ್ ಶಾಸಕರು ಕಾಂಗ್ರೆಸ್ ಸೇರುವುದು ಪಕ್ಕಾ ಆಗಿದೆ. ಬುಧವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ನಡೆದ ಸಭೆಯಲ್ಲಿ ಅಂತಿಮ ಹಂತದ ಮಾತುಕತೆಯಾಗಿದ್ದು ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಹೈಕಮಾಂಡ್ ಕೂಡಾ ಏಳು ಜನ ರೆಬಲ್ ಗಳ ಹಿಂದೆ ನಿಂತಿದ್ದು ಆಯಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಏಳು ಜನ ಜೆಡಿಎಸ್ ಶಾಸಕರು ದೆಹಲಿಯಲ್ಲರುವ ರಾಹುಲ್ ಗಾಂಧಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಜೆಡಿಎಸ್ ನಿಂದ ಕಾಂಗ್ರೆಸ್ ಸೇರಲು ಏಳು ಜನರು ತಿರ್ಮಾನ ಮಾಡಿದ್ದಾರೆ. ಡಿಸೆಂಬರ್ ಅಥಾವ ಜನವರಿ ಮೊದಲ ವಾರದಲ್ಲಿ ಅಧಿಕೃತವಾಗಿ ಸೆರ್ಪಡೆಯಾಗುತ್ತಾರೆ. ರಾಹುಲ್ ಗಾಂಧಿ ಅವರೇ ಈ ಶಾಸಕರನ್ನ ರಕ್ಷಿಸುವ ಹೊಣೆ ಹೊತ್ತಿದ್ದಾರೆ ಎನ್ನುವ ಮೂಲಕ ಮುಂದಿನ ಚುನಾವಣೆಗೆ ಟಿಕೆಟ್ ನೀಡುವುದಾಗಿ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ರು.
ಶ್ರೀನಿವಾಸ್ ಮೂರ್ತಿಗೆ ಇಲ್ಲ ಟಿಕೆಟ್?: ಜೆಡಿಎಸ್ ರೆಬಲ್ ನಾಯಕ ಶ್ರೀನಿವಾಸಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗೋದು ಅನುಮಾನ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಟಿಕೆಟ್ ಕೊಟ್ರೂ ಕ್ಷೇತ್ರವನ್ನೇ ಬಿಟ್ಟುಕೊಡುವ ಪರಿಸ್ಥಿತಿಯಲ್ಲಿ ಶ್ರೀನಿವಾಸ ಮೂರ್ತಿ ಇದ್ದಾರೆ. ಕೊರಟಗೆರೆಯಲ್ಲಿ ಕ್ಷೇತ್ರದಿಂದ ಗೆಲುವು ಕಷ್ಟ ಎಂದು ಪುಲಿಕೇಶಿ ನಗರದತ್ತ ಜಿ.ಪರಮೇಶ್ವರ್ ಕಣ್ಣು ಹಾಕಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ಗಾಗಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಶ್ರೀನಿವಾಸ್ ಮೂರ್ತಿ ಸಿದ್ಧರಾಗಬೇಕಿದೆ. ಪರಮೇಶ್ವರ್ಗಾಗಿ ಕ್ಷೇತ್ರ ಬಿಟ್ಟುಕೊಟ್ಟು ಎಂಎಲ್ಸಿ ಆಗಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಉಳಿದುಕೊಂಡಿರುವ ಸಿಎಂ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನ ಭೇಟಿ ಮಾಡಲಿದ್ದಾರೆ. ಬೆಳಗ್ಗೆ 11:25ಕ್ಕೆ ರಾಜನಾಥ್ ಸಿಂಗ್ ಭೇಟಿಗೆ ಸಮಯ ನಿಗದಿಯಾಗಿದ್ದು, ರಾಜನಾಥ್ ಸಿಂಗ್ ಕಚೇರಿಯಲ್ಲಿ ಭೇಟಿಯಾಗಲಿದ್ದಾರೆ. ಭೇಟಿ ವೇಳೆ ಮಂಗಳೂರು ಗಲಭೆ ವಿಚಾರವಾಗಿ ಮಾತುಕತೆ ನಡೆಯಲಿದೆ ಅಂತಾ ಮೂಲಗಳು ಹೇಳಿವೆ.
ಕರಾವಳಿ ಭಾಗದ ಗಲಭೆ ಕೋಮು ಸಂಘರ್ಷ ವಿಚಾರವಾಗಿ ರಾಜ್ಯ ಸಾಕಷ್ಟು ಸುದ್ದಿ ಮಾಡಿತ್ತು. ಬಿಜೆಪಿ ಸಂಸದರ ನಿಯೋಗ ಎನ್ಐಎ ಯಿಂದ ತನಿಖೆ ನಡೆಸುವಂತೆ ಮನವಿ ನೀಡಿದ್ದ ಹಿನ್ನೆಲೆ ರಾಜನಾಥ್ ಸಿಂಗ್ ಅವರನ್ನ ಭೇಟಿಯಾಗಲಿದ್ದಾರೆ ಅಂತಾ ಹೇಳಲಾಗಿದೆ. ಇದರ ಜೊತೆ ರಾಜ್ಯದ ವಿವಿಧ ಯೋಜನೆಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನ ರೈಲ್ವೆ ಭವನದಲ್ಲಿ ಭೇಟಿಯಾಗಿ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಪುನರ್ ಚಾಲನೆಗೆ ಆದ್ಯತೆ ನೀಡುವಂತೆ ಮನವಿ ಮಾಡಲಿದ್ದಾರೆ.