ರಾಯಚೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯ ವಿಕಾಸ ಪರ್ವ ಕಾರ್ಯಕ್ರಮಕ್ಕೆ ಹೊರಟಿದ್ದ ಕಾರ್ಯಕರ್ತರ ವಾಹನಗಳ ಮಧ್ಯೆ ಡಿಕ್ಕಿಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನಿಂದ ಬೆಂಗಳೂರಿಗೆ ಹೊರಟಿದ್ದ ಎರಡು ಕ್ರೂಸರ್ ವಾಹನಗಳು ಇಂದು ಬೆಳಗ್ಗಿನ ಜಾವ ದೊಡ್ಡಬಳ್ಳಾಪುರದ ಹೊರವಲಯದಲ್ಲಿ ಪರಸ್ಪರ ಡಿಕ್ಕಿಯಾಗಿವೆ. ಪರಿಣಾಮ ವಾಹನಗಳಲ್ಲಿದ್ದ ಕಾರ್ಯಕರ್ತರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬೆಂಗಳೂರಿಗೆ ಬೇಗ ತಲುಪಲು ವಾಹನಗಳು ಅತೀ ವೇಗದಲ್ಲಿದ್ದು, ಚಾಲಕನ ನಿಯಂತ್ರಣ ತಪ್ಪಿ ಹಿಂದಿನ ಗಾಡಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ಆವರಣದಲ್ಲಿ ಆಯೋಜಿಸಿರುವ ವಿಕಾಸ ಪರ್ವ ಕಾರ್ಯಕ್ರಮಕ್ಕೆ ರಾಯಚೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ತೆರಳಿದ್ದು, ಈ ವೇಳೆ ಅವಘಡ ಸಂಭವಿಸಿದೆ.