ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಐಸಿಸ್ ಮಾದರಿಯ ಯುವಕರ ಗುಂಪೊಂದು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ವಿವರಿಸಲಾದ ಬ್ಯಾರಿ ಭಾಷೆಯ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಈ ಬಗ್ಗೆ ಜಿಲ್ಲಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಹೌದು. ಕರಾವಳಿಯ ಮಂಗಳೂರಿಗೂ ಐಸಿಸ್ ಉಗ್ರ ಸಂಘಟನೆ ನೇಮಿಸುವ ವ್ಯಕ್ತಿಗಳು ಕಾಲಿಟ್ಟಿದ್ದಾರೆ ಎನ್ನುವ ಭಯಾನಕ ಸತ್ಯವೊಂದನ್ನು ಕಟ್ಟಾ ಇಸ್ಲಾಮಿಕ್ ಪಂಥದ ಮುಖಂಡರೊಬ್ಬರು ಬಿಚ್ಚಿಟ್ಟಿದ್ದಾರೆ.
ಸೌತ್ ಕೆನರಾ ಸಲಫಿ ಮೂವ್ಮೆಂಟ್ನ ಕಾರ್ಯದರ್ಶಿ ಇಸ್ಮಾಯೀಲ್ ಶಾಫಿ ಅವರು ಈ ರೀತಿಯ ಭಯಾನಕ ಸತ್ಯವನ್ನು ಬಿಚ್ವಿಟಿದ್ದಾರೆ. ಬ್ಯಾರಿ ಭಾಷೆಯಲ್ಲಿರುವ ಆಡಿಯೋ ಕ್ಲಿಪ್ ವೊಂದು ಇದೀಗ ಮುಸ್ಲಿಮರ ಅದರಲ್ಲೂ ಸಲಫಿ ಪಂಥದ ಗ್ರೂಪ್ ಗಳಲ್ಲಿ ಹರಿದಾಡುತ್ತಿದ್ದು ಇದರಲ್ಲಿ ಐಸಿಸ್ ಮಂಗಳೂರಿನಲ್ಲಿ ಕಾಲೂರುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಐಸಿಸ್ ಅವರ ಚಲನವಲನ, ನಡತೆ ಮತ್ತು ಉಡುಪುಗಳ ಬಗ್ಗೆಯೂ ಜನರಿಗೆ ಮಾಹಿತಿ ನೀಡಿದ್ದಾರೆ. ಸಲಫಿಗಳಂತೆ ತೋರಿಸಿಕೊಳ್ಳುವ ಅವರು ಸಲಫಿಗಳಲ್ಲ, ಬದಲಾಗಿ ಅವರು ಐಸಿಸ್ ಪ್ರೇರಿತ ವ್ಯಕ್ತಿಗಳು. ಇದಲ್ಲದೆ ಅಂತಹ ಯುವಕರಿಗೆ ಹೆಣ್ಣು ಮಕ್ಕಳನ್ನು ಕೊಡಬೇಡಿ ಇದರಿಂದ ಸಮುದಾಯಕ್ಕೆ ಅಪಾಯವಿದೆ ಎಂದು ಅವರು ಆಡಿಯೋದಲ್ಲಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಇಂಥ ಒಂದಿಷ್ಟು ಯುವಕರು ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಝಕರಿಯಾ ಸಲಾಹಿ ಎನ್ನುವ ವ್ಯಕ್ತಿ ಯುವಕರಿಗೆ ತರಬೇತಿ ನೀಡಿ ಹಿಜ್ರಾ (ಪ್ರವಾಸ) ಹೋಗುವಂತೆ ಪ್ರೇರೇಪಿಸುತ್ತಾನೆ. ಇಂತಹವರು ತಮ್ಮ ಮದುವೆ ಕಾರ್ಯದಲ್ಲಿ ಮೈಕ್ ಬಳಸುವುದಿಲ್ಲ ಮತ್ತು ಸಾಕ್ಷಿಗಳನ್ನು ಇಡುವುದಿಲ್ಲ ಎಂದು ಮಾತನಾಡಿದ್ದಾರೆ.
ಆಡಿಯೋದಲ್ಲಿ ಹೇಳಿದ್ದು ಏನು?
ಅಸ್ಸಲಾಂ ಅಲೈಕುಂ ರಹ್ಮತುಲ್ಲಾಹಿ ವಬರಕಾತುಹು. ಎಲ್ಲಾ ಸಲಫಿ ಕಾರ್ಯಕರ್ತರಲ್ಲಿ ನಾನೊಂದು ವಿಷಯ ಹೇಳುತ್ತಿದ್ದೇನೆ. ಇದೊಂದು ದುಃಖದ ವಿಷಯ. ಇವತ್ತು ಸಲಫಿ ಸಂಘಟನೆ ಮೇಲೆ ಫ್ಯಾಸಿಸ್ಟ್ ಶಕ್ತಿಗಳ ಜೊತೆಗೆ ಇತರ ದ್ವೇಷದ ಕಣ್ಣಿದೆ. ನಮ್ಮ ಸಂಘಟನೆಯನ್ನ ಮಟ್ಟ ಹಾಕಲು ಪ್ರಯತ್ನಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ನಮ್ಮೊಳಗೆ ಕೆಲವರು ನಮ್ಮನ್ನೇ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮೊನ್ನೆ ಮಂಗಳೂರಿನ ಅರ್ಕುಳದಲ್ಲೊಂದು ಮದುವೆ ನಡೆಯಿತು. ಈ ವೇಳೆ ಅಲ್ಲಿಗೆ ಪುರೋಹಿತನೊಬ್ಬ ಬಂದ. ಆತ ಹೆಣ್ಣಿನ ತಂದೆಯ ಬಳಿ ‘ನೀವು ಮುಸ್ಲಿಮ್ ಅಲ್ವಾ..? ಹೀಗೆ ಯಾರಿಗೂ ಕೇಳಿಸದಂತೆ ಏನೇನೋ ಹೇಳಿ ಮತ್ತೆ ನಿಖಾಹ್ ಮಾಡಿಸಿದ ಘಟನೆ ನಡೆದಿದೆ. ಇದು ಧರ್ಮಕ್ಕಾಗಿ ಮಾಡುವ ಹೋರಾಟವನ್ನ ನಿಲ್ಲಿಸುವ ಪ್ರಯತ್ನ. ಅಲ್ಲಿಗೆ ಬಂದ ವ್ಯಕ್ತಿ ‘ಐಸಿಸ್’ ನಂತೆ ಕಪ್ಪು ಬಟ್ಟೆ ಧರಿಸಿದ್ದ. ಅವರು ಯಾರ ಜೊತೆಗೆ ಮಾತನಾಡಲ್ಲ. ನಮ್ಮವರನ್ನ ಭಾರತದಲ್ಲಿ ವಾಸ ಮಾಡಲು ಅವರು ಬಿಡಲ್ಲ. ನಮ್ಮನ್ನು ಓಡಿಸುವುದೇ ಅವರ ಗುರಿ. ಅವರು ಉದ್ಯೋಗಕ್ಕೂ ಹೋಗಲ್ಲ. ಅವರಿಗೆ ಅವರದ್ದೇ ಆದ ಗುಂಪಿದೆ. ಅವರು ಜೋಳಿಗೆ ಹಾಕಿಕೊಂಡು ತಿರುಗಾಡುತ್ತಿರುತ್ತಾರೆ. ಇಂತಹವರು ತಮ್ಮ ಪತ್ನಿಯನ್ನ, ಮನೆಯಲ್ಲಿರುವ ಸ್ತ್ರೀಯರನ್ನ ಗೃಹ ಬಂಧನದಲ್ಲಿಡುತ್ತಾರೆ.
ಕೇರಳದಲ್ಲಿ ಯುವಕರ ಜೊತೆಗೆ ಮಹಿಳೆಯರು ಸಹ ಐಸಿಸ್ ಗೆ ಸೇರುತ್ತಿದ್ದಾರೆ. ಹಿಜರಾಗೆ ಹೋಗಿ ಅಪಘಾನಿಸ್ತಾನ ಅಥವಾ ಐಸಿಸ್ ಪ್ರಾಬಲ್ಯ ಇರುವ ದೇಶಗಳಲ್ಲಿ ಹೋರಾಟ ಮಾಡಿ ಸಾಯುತ್ತಿದ್ದಾರೆ. ಇದು ಅವರ ಪಾಲಿಗೆ ಹುತಾತ್ಮ ಆದಂತೆ. ಹುತಾತ್ಮ ಆಗಿ ಸ್ವರ್ಗ ಸೇರುವುದು ಅವರ ಗುರಿ. ಇಂತಹದ್ದೇ ಗುಂಪು ದಕ್ಷಿಣ ಕನ್ನಡ ಜಿಲ್ಲೆಯ ಬಿಸಿ ರೋಡ್ ಬಳಿ ಇದೆ. ಇಲ್ಲಿ ಅವರಿಗೆ ಗುಡಿ ಇದೆ. ಅಲ್ಲಿ ಇವರ ಬಿಡಾರ ಇದೆ. ಇವರು ಹೆಚ್ಚು ಕಪ್ಪು ಬಟ್ಟೆ ಧರಿಸಿರುತ್ತಾರೆ. ವಿದ್ಯಾವಂತ ಯುವಕ, ಯುವತಿಯರನ್ನ ಮೈಂಡ್ ವಾಶ್ ಮಾಡಿ ‘ ಸಲಫಿ’ ಹೆಸರಲ್ಲಿ ಐಸಿಸ್ ಗಾಗಿ ಇವರನ್ನ ಸೇರಿಸುತ್ತಿದ್ದಾರೆ. ಹೀಗಾಗಿ ನಾವೆಲ್ಲಾ ನಕಲಿ ಸಲಫಿಗಳ ಕುರಿತು ಜಾಗೃತಿ ವಹಿಸಬೇಕಾಗಿದೆ.