ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೆವ್ವನೋ ಅಥವಾ ಭೂತನೋ? ಅವ್ರಿಗೆ ಕಾಂಗ್ರೆಸ್ ಪಕ್ಷ ಅಂಜುವ ಅಗತ್ಯವೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 71ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇತಿಹಾಸವುಳ್ಳ ಬಹುದೊಡ್ಡ ಹಾಗೂ ದೊಡ್ಡ ಆಯುಷ್ಯವುಳ್ಳಂತಹ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಇದ್ದಾಗ ಬಿಜೆಪಿ ಪಕ್ಷ ಇರಲಿಲ್ಲ. ಹೀಗಾಗಿ ಬಿಜೆಪಿ ಪಕ್ಷದ ಅಮಿತ್ ಶಾ ಅವರಿಗೆ ಇಂತಹ ಒಂದು ದೊಡ್ಡ ಪಕ್ಷ ಅಂಜೋದು ಅಂದ್ರೆ ಅದೊಂದು ಹಾಸ್ಯಾಸ್ಪದ ಹೇಳಿಕೆಯಾಗುತ್ತದೆ.
ಅಮಿತ್ ಶಾ ಅವರಿಗೆ ಅಂಜೋದಕ್ಕೆ ಅವರೇನು ದೆವ್ವನೋ ಅಥವಾ ಭೂತವೋ? ಅವರು ಒಬ್ಬ ಮನುಷ್ಯನೇ. ರಾಜಕೀಯದಲ್ಲಿ ಅವರೊಬ್ಬ ನಾಯಕ ಅಷ್ಟೇ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ನಾಯಕರಿದ್ದಾರೆ. ನಮ್ಮ ಪರವಾಗಿ ಜನ ಇದ್ದಾರೆ. ಹೀಗಾಗಿ ಅಮತ್ ಶಾ ರಂತಹ ನೂರು, ಸಾವಿರ ಅಥವಾ ಲಕ್ಷ ಜನ ಬಂದ್ರೂ ಕಾಂಗ್ರೆಸ್ ಪಕ್ಷ ಅಂಜುವ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ರು.
ಅಮಿತ್ ಶಾ ಅವರು ಬರೋದಿಕ್ಕಿಂತ ಮೊದಲೇ ರಾಹುಲ್ ಗಾಂಧಿ ಕಾರ್ಯಕ್ರಮ ಕರ್ನಾಟಕದಲ್ಲಿ ಫಿಕ್ಸ್ ಆಗಿತ್ತು. ಧರಂ ಸಿಂಗ್ ಅವರು ತೀರಿಕೊಂಡ ಕಾರಣ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಅಲ್ಲದೇ ಆಗಸ್ಟ್ ತಿಂಗಳಿನಲ್ಲೇ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡುತ್ತೇವೆ ಅಂತ ಮಾತು ಕೊಟ್ಟಿದ್ದೆವು. ಹೀಗಾಗಿ ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಸಂಬಂಧವೇ ಇಲ್ಲ ಅಂದ್ರು.
ಇದೇ ವೇಳೆ ನಟ ಉಪೇಂದ್ರ ರಾಜಕೀಯ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಬೇಕಾದ್ರೂ ರಾಜಕೀಯ ಪ್ರವೇಶ ಮಾಡಬಹುದು. ಆದ್ರೆ ಉಪೇಂದ್ರ ಅವ್ರ ರಾಜಕೀಯ ಎಂಟ್ರಿ ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಸಿನಿಮಾದವರಾದ ಉಪೇಂದ್ರ ಎಕ್ಸ್ ಕ್ಲೂಸಿವ್ ಆಗಿ ರಾಜಕೀಯ ಪ್ರವೇಶ ಮಾಡ್ತಿದ್ದಾರೆ. ಅವ್ರ ಸಾಧಕ-ಬಾಧಕ ಮುಂದಿನ ದಿನಗಳಲ್ಲಿ ತಿಳಿಯುತ್ತೆ ಅಂತ ಹೇಳಿದ್ರು.