ಬಾಗಲಕೋಟೆ: ಅವರಪ್ಪನಾಣೆ ಎಚ್ಡಿಕೆ ಸಿಎಂ ಆಗೋದಿಲ್ಲ ಎಂದಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಬೇಕಿದ್ದರೆ ಅವರಪ್ಪನ ಮೇಲೆ ಆಣೆ ಮಾಡಿಕೊಳ್ಳಲಿ. ಅದು ಬಿಟ್ಟು ನಮ್ಮಪ್ಪನ ಮೇಲೆ ಆಣೆ ಮಾಡುವುದು ಏಕೆ? ಮೇಲಾಗಿ ನಮ್ಮಪ್ಪನ ಹೆಸರು ಯಾವಾಗ ತಗೊಂಡ್ರು ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯ ಬಾದಾಮಿಯಲ್ಲಿ ಕೆರೂರನ ಜೆಡಿಎಸ್ ಸಮಾವೇಶಕ್ಕೆ ತರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯ ಅವರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಎನ್ನುತ್ತಿದ್ದಾರೆ. ತಮ್ಮಪ್ಪನ ಮೇಲೆ ಆಣೆ ಮಾಡೋದು ಬಿಟ್ಟು ನಮ್ಮಪ್ಪನ ಮೇಲೆ ಆಣೆ ಮಾಡುವುದು ಏಕೆ? ಇದರಿಂದಲೇ ಗೊತ್ತಾಗುತ್ತದೆ ಮುಂದಿನ ಸಿಎಂ ಆಗೋದು ನಾನೇ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ರಕ್ತದ ಓಕುಳಿ ಮಾಡಿ ಚುನಾವಣೆಯಲ್ಲಿ ಗೆಲುವು ಪಡೆಯಲು ಹೊರಟಿರುವ ಬಿಜೆಪಿ ಮತ್ತು ಕಾಂಗ್ರೆಸ್ಗೆ ಲಾಭ ಸಿಗುವುದಿಲ್ಲ. ಬದಲಾಗಿ ಈ ಬಾರಿ ಜನರು ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದರು.
ಸಂಕ್ರಮಣದ ಹೊತ್ತಿಗೆ ಪಕ್ಷದಿಂದ ಸ್ಪರ್ಧಿಸುವ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಲಿದ್ದು, ರಾಷ್ಟ್ರೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಚಿಕ್ಕಪುಟ್ಟ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದರು.
ಮದ್ಯಪಾನ ನಿಷೇಧ: ರಾಜ್ಯ ಸರ್ಕಾರ ಜನರಿಗೆ ಹಲವು ಭಾಗ್ಯಗಳನ್ನು ನೀಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಅಬಕಾರಿ ಇಲಾಖೆ ಮೂಲಕ ಅದೇ ಜನರ ಬಳಿ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮದ್ಯದ ಮೇಲಿನ ತೆರಿಗೆಯನ್ನು ಕಡಿತಗೊಳಿಸುತ್ತೇನೆ ಎಂದರು. ತಮಗೆ ಮದ್ಯ ನಿಷೇಧ ಕುರಿತು ಚಿಂತನೆ ಇದ್ದು, ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೂ ಮುಂದಾಗುತ್ತೇನೆ. ಆದರೆ ಕುಡಿಯೋರು ನಮ್ಮ ವಿರುದ್ಧ ತಿರುಗಿಬಿದ್ದಾರು ಎನ್ನುವ ಭಯದಿಂದ ಸುಮ್ಮನಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.