ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಮಾತಿನ ಯುದ್ಧವು ಮುಂದುವರೆದಿದ್ದು, ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್, ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ವಿಶ್ವ ಸಂಸ್ಥೆ ಭದ್ರತಾ ಸಭೆಯ ಅಧಿವೇಶನದಲ್ಲಿ ಪಾಕಿಸ್ತಾನದ ನೈಜ ಚಿತ್ರವನ್ನು ತೆರೆದಿಟ್ಟ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನವು ಭಯೋತ್ಪಾದಕರನ್ನು ಉತ್ಪಾದಿಸುವ ಕಾರ್ಖಾನೆ ಎಂದು ಟೀಕಿದ್ದರು.
ಭಾರತದ ಟೀಕೆಗಳಿಗೆ ಉತ್ತರಿಸುವ ಬರದಲ್ಲಿ ಪಾಕ್ ಸಚಿವ ಆಸಿಫ್ ಪ್ರಧಾನಿ ಮೋದಿಯವರನ್ನು ಭಯೋತ್ಪಾದಕ ಎಂದು ಹೇಳಿ ಉದ್ದಟತನವನ್ನು ಮೆರೆದಿದ್ದಾರೆ. ಗುಜರಾತ್ ನಲ್ಲಿ ನಡೆದ ಮುಸ್ಲಿಮರ ಹತ್ಯೆಯ ರಕ್ತದ ಕಲೆಗಳು ಮೋದಿಯವರ ಕೈ ಮೆತ್ತಿಕೊಂಡಿವೆ. ಭಾರತವನ್ನು ಆರ್ಎಸ್ಎಸ್ ಎಂಬ ಭಯೋತ್ಪಾದಕ ಪಕ್ಷವು ಮುನ್ನಡೆಸುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ಮಾತನಾಡಿದ್ದ ಆಸಿಫ್ ಪಾಕಿಸ್ತಾನಕ್ಕೆ ಸಯೀದ್, ಎಲ್ಇಟಿ ಸಂಘಟನೆಗಳು ಹೆಚ್ಚಿನ ಹೊರೆಯಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ಸಯೀದ್ ಹಾಗೂ ಎಲ್ಇಟಿ ಸಂಘಟನೆಗಳು ಜನಿಸಲು ಮೂಲ ಕಾರಣವೇ ಅಮೆರಿಕ. 20-30 ಹಿಂದೆ ಅಮೆರಿಕಗೆ ಎಲ್ಇಟಿ ಮತ್ತು ಸಯೀದ್ ಬಹಳ ಪ್ರಿಯರಾಗಿದ್ದರು. ಶ್ವೇತ ಭವನದಲ್ಲಿ ಒಟ್ಟಿಗೆ ಕೂತು ವೈನ್ ಕುಡಿಯುತ್ತಿದ್ದರು ಈಗ ನಮ್ಮ ಮೇಲೆ ನಿಂದನೆ ಮಾಡುತ್ತಿದೆ ಎಂದು ಅಮೆರಿಕ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಪಾಕಿಸ್ತಾನಕ್ಕೆ ಭಯೋತ್ಪಾದಕರ ವಿರುದ್ಧ ಕ್ರಮಕೈಗೊಳ್ಳಲು ಕಾಲಾವಕಾಶವನ್ನು ಕೇಳಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದೆ ಪಾಕಿಸ್ತಾನ ತಮ್ಮಿಂದ ಪಡೆದ ಸಹಾಯಧನವನ್ನು ಉಗ್ರರಿಗೆ ಸಹಾಯ ಮಾಡಲು ಬಳಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದರು. ಅಲ್ಲದೇ ಪಾಕಿಸ್ತಾನವು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಭಾರತ ಸಾಕ್ಷಿ ಸಮೇತ ವಿಶ್ವಮಟ್ಟದಲ್ಲಿ ಸಾಬಿತುಪಡಿಸಿತ್ತು. ಜಪಾನ್ ಸಹ ಪಾಕಿಸ್ತಾನದ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಮತ್ತು ಜೈಶ್ ಎ ಮೊಹಮ್ಮದ್(ಜೆಇಎಂ) ಸಂಸ್ಥೆಗಳನ್ನು ಭಯೋತ್ಪಾದನಾ ಸಂಘಟನೆಗಳು ಎಂದು ಘೋಷಣೆಯನ್ನು ಮಾಡಿತ್ತು. ಬ್ರೀಕ್ ಸಮಾವೇಶದಲ್ಲಿಯೂ ಸಹ ಭಾರತ ಈ ಸಂಸ್ಥೆಗಳ ನಿಷೇಧಕ್ಕೆ ಆಗ್ರಹಿಸಿತ್ತು.
ನೆರೆಯ ರಾಷ್ಟ್ರ ಅಪ್ಘಾನಿಸ್ತಾನವು ಸಹ ತನ್ನ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಗಡಿಯಲ್ಲಿ ಪಾಕಿಸ್ತಾನ ಎಲ್ಲಾ ಸೌಲಭ್ಯಗಳನ್ನು ಉಗ್ರರಿಗೆ ನೀಡುತ್ತಿದೆ ಎಂದು ಆರೋಪಿಸಿತ್ತು.
https://publictv.biskuht.com/how-india-bashed-pakistan-at-un-eenam-gambhirs-reply-to-islamabad/