ನವದೆಹಲಿ: ಐಸಿಸಿ ಪೂರ್ವ ನಿಗದಿತ ನಿಯಮಗಳಂತೆ 2021 ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಭಾರತದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಟೂರ್ನಿಗೆ ತೆರಿಗೆ ವಿನಾಯಿತಿ ನಿರಾಕರಿಸಿದ ಕಾರಣ ಟೂರ್ನಿಯನ್ನು ಬೇರೆಡೆ ಸ್ಥಳಾಂತರಿಸಲು ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಈ ಕುರಿತು ಐಸಿಸಿ, ಬಿಸಿಸಿಐ ಭಾರತ ಸರ್ಕಾರದ ಜೊತೆ ತೆರಿಗೆ ವಿನಾಯಿತಿ ಪಡೆಯುವ ಕುರಿತು ಮಾತುಕತೆ ನಡೆಸುವಂತೆ ಸೂಚಿಸಿದೆ. ಒಂದು ವೇಳೆ ಸರ್ಕಾರದೊಂದಿಗೆ ಮಾತುಕತೆ ವಿಫಲವಾದರೆ ಅನಿರ್ವಾಯವಾಗಿ ಬೇರೆಡೆ ಟೂರ್ನಿಯನ್ನು ಆಯೋಜನೆ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.
ಇದೇ ಮೊದಲಲ್ಲ: 2002 ರಲ್ಲಿ ಭಾರತದಲ್ಲಿ ಆಯೋಜನೆ ಮಾಡಬೇಕಾಗಿದ್ದ ಐಸಿಸಿ ಚಾಂಪಿಯನ್ಸ್ ಟೂರ್ನಿ ವೇಳೆಯೂ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿತ್ತು. ಈ ವೇಳೆ ಐಸಿಸಿ ಟೂರ್ನಿಯನ್ನು ಶ್ರೀಲಂಕಾ ಕ್ಕೆ ವರ್ಗಾವಣೆ ಮಾಡಿತ್ತು. ಈ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್ ಪ್ರವೇಶ ಪಡೆದಿದ್ದವು. ಶ್ರೀಲಂಕಾ 7 ವಿಕೆಟಿಗೆ 222 ರನ್ ಮಾಡಿದರೆ, ಗುರಿ ಬೆನ್ನತ್ತಿದ್ದ ಭಾರತಕ್ಕೆ 9ನೇ ಓವರ್ ವೇಳೆ ಮಳೆ ಅಡ್ಡಿ ಪಡಿಸಿತ್ತು. ಭಾರತ ಈ ವೇಳೆ ಒಂದು ವಿಕೆಟ್ ಗೆ 38 ರನ್ ಗಳಿಸಿತ್ತು. ಕೊನೆಗೆ ಫೈನಲ್ ಪಂದ್ಯ ಸಂಪೂರ್ಣ ಮಳೆಯಿಂದ ರದ್ದಾಗಿ ಇತ್ತಂಡಗಳು ಪ್ರಶಸ್ತಿಯನ್ನು ಹಂಚಿಕೊಂಡಿತ್ತು.
ಐಸಿಸಿ ತನ್ನ ಪರಿಷ್ಕೃತ ಆರ್ಥಿಕ ವರ್ಷದ ಮೊತ್ತದಲ್ಲಿ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳಿಗೆ ಹೆಚ್ಚಿನ ಅನುದಾನ ನೀಡಿದೆ. 2017 ಜೂನ್ ನಿಂದ ಇತ್ತಂಡಗಳಿಗೂ ಶಾಶ್ವತ ಸದಸ್ಯತ್ವ ನೀಡಿರುವ ಕುರಿತ ಮಾಹಿತಿ ನೀಡಿದೆ. ವಾರ್ಷಿಕವಾಗಿ ಐಸಿಸಿ ಸುಮಾರು 40 ಸಾವಿರ ಅಮೆರಿಕನ್ ಡಾಲರ್( ಅಂದಾಜು 256 ಕೋಟಿ ರೂ.) ಪಡೆಯುವ ಸಾಧ್ಯತೆ ಇದೆ.