ಬೆಂಗಳೂರು: ಎಷ್ಟೇ ಓದಿ ಬರೆದರೂ ಸಂದರ್ಶನದಲ್ಲಿ ಅಂಕ ಹೋಗುತ್ತೆ. ಕೆಲಸ ಕೂಡಾ ಕೈ ತಪ್ಪುತ್ತೆ ಅನ್ನೋ ಆತಂಕ ಇರೋ ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಗ್ರೂಪ್ ಎ ಮತ್ತು ಬಿ ಹುದ್ದೆಗಳಿಗೆ ಸಂದರ್ಶನ ವ್ಯವಸ್ಥೆ ರದ್ದು ಮಾಡಿದ್ದು, ನೇರ ನೇಮಕಾತಿ ಮೂಲಕ ಹುದ್ದೆ ಭರ್ತಿಗೆ ನಿಯಮ ರೂಪಿಸಿದೆ.
ಈಗಾಗಲೇ “ಸಿ” ಗ್ರೂಪ್ ಹುದ್ದೆಗಳಿಗೆ ಸಂದರ್ಶನ ವ್ಯವಸ್ಥೆ ರದ್ದು ಮಾಡಲಾಗಿದೆ. ನೇಮಕಾತಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಈಗ ಎ ಮತ್ತು ಬಿ ಗ್ರೂಪ್ ಹುದ್ದೆಗಳ ಸಂದರ್ಶನ ವ್ಯವಸ್ಥೆ ರದ್ದು ಮಾಡಿದೆ. ಈ ಸಂಬಂಧ ಕರಡು ನಿಯಮವನ್ನ ಬಿಡುಗಡೆ ಮಾಡಿದೆ. ಆದ್ರೆ ಈ ಸಂದರ್ಶನ ವ್ಯವಸ್ಥೆಯನ್ನು ಎಲ್ಲಾ ಹುದ್ದೆಗಳಿಗೂ ಜಾರಿಗೆ ತಂದಿಲ್ಲ. ನಿಯಮಿತ ಮತ್ತು ಸರ್ಕಾರ ನಿರ್ಧಾರ ಮಾಡೋ ಹುದ್ದೆಗಳಿಗೆ ಮಾತ್ರ ಸಂದರ್ಶನ ವ್ಯವಸ್ಥೆ ರದ್ದಾಗಲಿದೆ.
ಕರಡು ನಿಯಮದ ಪ್ರಕಾರ ಇನ್ನುಂದೆ ಎ ಮತ್ತು ಬಿ ಗ್ರೂಪ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತೆ. ಪರೀಕ್ಷೆಯಲ್ಲಿ ಪಡೆದ ಅಂಕ ಮಾತ್ರ ಪರಿಗಣನೆಗೆ ತೆಗೆದುಕೊಂಡು, ಶ್ರೇಣಿ ಆಧಾರದಲ್ಲಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತೆ. ಹೊಸ ನಿಯಮದ ಕರಡು ನಿಯಮ ಬಿಡುಗಡೆ ಮಾಡಿದ್ದು, ಆಕ್ಷೇಪಣೆ ಇದ್ದರೆ ಅಥವಾ ಸಲಹೆಗಳು ಇದ್ದರೆ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗಕ್ಕೆ ಪತ್ರದ ಮುಖೇನ ತಿಳಿಸಬಹುದಾಗಿದೆ.