ಬೆಂಗಳೂರು: ಕನ್ನಡ ಚಲನಚಿತ್ರ ಕಲಾವಿದರ ಸಂಘದ ನೂತನ ಕಟ್ಟಡದ ಗೃಹಪ್ರವೇಶ ಕಾರ್ಯಕ್ರಮ ಇಂದು ಶಾಸ್ತ್ರೋಕ್ತವಾಗಿ ನಡೆಯಿತು. ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅಧ್ಯಕ್ಷತೆಯಲ್ಲಿ ಕನ್ನಡ ಕಲಾವಿದರ ಸಂಘ ನಿರ್ಮಿತವಾಗಿದ್ದು ಸ್ವತಃ ಅಂಬಿ ದಂಪತಿ ಶಾಸ್ತ್ರಬದ್ಧವಾಗಿ ಗೃಹಪ್ರವೇಶ ಪೂಜೆ ನೆರವೇರಿಸಿದ್ರು. ಈ ವೇಳೆ ಗಣಹೋಮ, ಸುದರ್ಶನ ಹೋಮಗಳನ್ನ ಮಾಡಲಾಯಿತು.
ಸಂಘದ ಖಜಾಂಚಿ ದೊಡ್ಡಣ್ಣ, ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್, ಹಿರಿಯನಟ ಲೋಕನಾಥ್, ಹೇಮಾ ಚೌಧರಿ ಮುಂತಾದವರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಚಾಮರಾಜ ಪೇಟೆಯಲ್ಲಿ ನಿರ್ಮಿತವಾದ ಕಲಾವಿದರ ಸಂಘದ ಕಟ್ಟಡವನ್ನು ಫೆಬ್ರವರಿ 8ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಸದಾ ರೆಬೆಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ರೆಬೆಲ್ ಸ್ಟಾರ್ ಅಂಬರೀಶ್ ಇಂದು ಸಾಂಪ್ರದಾಯಿಕ ಪಂಚೆ ಉಟ್ಟು ಕಂಗೊಳಿಸಿದ್ರು. ಅಂಬರೀಶ್ ಜೊತೆ ಪತ್ನಿ ಸುಮಲತಾ ಜರತಾರಿ ಸೀರೆಯುಟ್ಟು ಮಿಂಚಿದರು.
ನಿನ್ನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಬಿ.ಸರೋಜಾದೇವಿ, ಕಲಾವಿದರ ಸಂಘದ ಕಟ್ಟಡದ ಬಗ್ಗೆ ಅನೇಕ ಬಾರಿ ಮಾತನಾಡಿದ್ದೇವೆ. ನಮ್ಮ ಎಲ್ಲಾ ಕಲಾವಿದರ ಕನಸು ಇಂದು ನನಸಾಗಿದೆ. ಇಲ್ಲಿ ಸಿನೆಮಾಗೆ ಸಂಬಂಧಿತ ಹಲವಾರು ಚಟುವಟಿಕೆಗಳು ನಡೆಯಲಿವೆ ಎಂದರು.
ಇದೇ ವೇಳೆ ಮಾತನಾಡಿದ ನಟ ರಮೇಶ್ ಅರವಿಂದ್, ನಾವೆಲ್ಲರೂ ಒಂದೇ ಸೂರಿನಡಿ ಸೇರುತ್ತಿದ್ದೇವೆ. ಇದು ಕಟ್ಟಡವಲ್ಲ, ಒಗ್ಗಟ್ಟಿನ ಸಂಕೇತ ಎಂದರು. ಉದ್ಘಾಟನಾ ಸಮಾರಂಭದಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ತಾರಾ, ದುನಿಯಾ ವಿಜಯ್, ವಿಜಯಲಕ್ಷ್ಮಿ ಸಿಂಗ್, ಸಚಿವ ತನ್ವೀರ್ ಸೇಠ್, ಶಾಸಕ ಜಮೀರ್ ಅಹಮದ್ ಭಾಗವಹಿಸಿದ್ದರು.