ಗದಗ: ಒಬ್ಬರು ಇಬ್ಬರೂ ದೇವರಿಗಾಗಿ ಮೌನ ವ್ರತ ಮಾಡುತ್ತಾರೆ. ಆದರೆ ಈ ಗ್ರಾಮದಲ್ಲಿ ದೇವಿ ಜಾತ್ರೆಯ ಬಂದರೆ ಸಾಕು ಅಂದು ಊರಿಗೆ ಊರೇ ಮೌನ ಹಾಗೂ ನಿಶಬ್ಧವಾಗಿರುತ್ತೆ. ವರ್ಷದಲ್ಲಿ ಒಂದು ದಿನ ಊರಲ್ಲಿರುವ ಎಲ್ಲಾ ಮನೆಗಳಿಗೆ ಬೀಗ ಹಾಕಿ ದೇವಿ ದರ್ಶನಕ್ಕೆ ಹೋಗುತ್ತಾರೆ.
ಇದು ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮ. ಈ ಗ್ರಾಮದಲ್ಲಿ ಕಾರ್ತಿಕ ಮಾಸದ ಛಟ್ಟಿ ಅಮವಾಸ್ಯೆ ನಂತರ ಮಂಗಳವಾರ, ಬುಧವಾರ ಎರಡು ದಿನ ಊರ ಆಚೆ ಇರುವ ಎರಿಶಿಗೆಮ್ಮ ದೇವಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಈ ಎರಿಶಿಗೆಮ್ಮ ಊರಿಂದ ಸುಮಾರು ಐದು ಕಿಲೋಮಿಟರ್ ದೂರದಲ್ಲಿದ್ದು, ಈ ಜಾತ್ರೆಗೆ ಸವಡಿ ಗ್ರಾಮದ ಸುತ್ತಮುತ್ತಲಿನ ಸಾವಿರಾರು ಭಕ್ತರು ಬಂದು ಪಾಲ್ಗೊಳ್ಳುತ್ತಾರೆ.
ಬೆಳ್ಳಿಗ್ಗೆಯಿಂದ ಸಾಯಂಕಾಲದವರೆಗೆ ಊರಲ್ಲಿ ಒಬ್ಬರು ಇರುವುದಿಲ್ಲ. ತಮ್ಮ ತಮ್ಮ ಮನೆಗೆ ಬೀಗ ಹಾಕಿಕೊಂಡು ಎಲ್ಲರೂ ದೇವಿ ದರ್ಶನಕ್ಕೆ ಮುಂದಾಗುತ್ತಾರೆ. ಇದು ಹಿಂದಿನಿಂದ ನಡೆದುಕೊಂಡು ಬಂದ ಸಾಂಪ್ರದಾಯಕ ಪದ್ಧತಿ ಎಂದು ದೇವಸ್ಥಾನದ ಪೂಜಾರಿ ಸಂಗನಬಸಯ್ಯ ತಿಳಿಸಿದರು.
ಈ ದೇವಿ ಸನ್ನಿದಿಗೆ ಬಂದು ಭಕ್ತರು ಏನು ಬೇಡಿಕೊಂಡರೂ ಅವರ ಇಷ್ಠಾರ್ಥಗಳೆಲ್ಲಾ ಈಡೆರುತ್ತವೆ ಎಂದು ಭಕ್ತರಾದ ಗೀತಾ ಹೇಳುತ್ತಾರೆ.
ಜಾತ್ರೆಯ ಪ್ರಯುಕ್ತ ವಿವಿಧ ಬಗೆಯ ಅಡುಗೆ ಮಾಡಿಕೊಂಡು ಕಾಲುನಡಿಗೆ, ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ಇನ್ನಿತರೆ ವಾಹನಗಳ ಮೂಲಕ ದೇವಿಯ ಸನ್ನಿಧಾನಕ್ಕೆ ಬಂದು ದರ್ಶನ ಪಡೆದು ಇಲ್ಲಿಯ ಜನರು ಪುನೀತರಾಗುತ್ತಾರೆ.