ಸೌದಿ ಅರೇಬಿಯಾ: ವಿದೇಶದಲ್ಲಿರುವ ಭಾರತೀಯರು ಆಧಾರ್ ಕಾರ್ಡ್ ಬಳಸಿಕೊಂಡು ತಮ್ಮ ರೇಷನ್ ಕಾರ್ಡನ್ನು ಪಡೆಯಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಮದೀನಾ ಸೆಕ್ಟರ್ ವತಿಯಿಂದ ಸೌದಿ ಅರೇಬಿಯಾದ ಮದೀನಾದಲ್ಲಿರುವ ಕೆ.ಸಿ.ಎಫ್ ಭವನದಲ್ಲಿ ಸೋಮವಾರ ನಡೆದ ಅಸುಪ್ಫಾ 2ನೇ ಆವೃತ್ತಿಯ ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟಿಸಿ ಮಾತನಾಡಿದರು.
ಅನಿವಾಸಿಗಳಾದ ನೀವು ವಿದೇಶದಲ್ಲಿದ್ದುಕೊಂಡೇ ಅರ್ಜಿ ಸಲ್ಲಿಸಿ, ತಿಂಗಳೊಳಗೆ ರೇಷನ್ ಕಾರ್ಡ್ ನಿಮ್ಮ ಕೈ ಸೇರಲಿದೆ ಎಂದರು. ಕಲಿಕೆ ಸಮಯದಲ್ಲಿ ಬಡತನದಿಂದಾಗಿ ಇಂಗ್ಲಿಷ್ ಭಾಷೆ ಕಲಿಯಲು ಸಾಧ್ಯವಾಗದ ಮಂದಿಗೆ ವಿದೇಶದಲ್ಲಿದ್ದುಕೊಂಡು ಕೆ.ಸಿ.ಎಫ್ ಆಧಾರ ಸ್ತಂಭವಾಗಿ ಇಂಗ್ಲಿಷ್ ಭಾಷೆ ಕಲಿಸಲು ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭ ಕೆ.ಸಿ.ಎಫ್ ಕಾರ್ಯಕರ್ತರು ಸಚಿವ ಯು.ಟಿ.ಖಾದರ್ ಹಾಗೂ ಇಹ್ಸಾನ್ ಮುಖ್ಯಸ್ಥ ಇಬ್ರಾಹಿಂ ಸಖಾಫಿ ದಾವಣಗೆರೆ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಕೆ.ಎಸಿ.ಎಫ್ ರಾಷ್ಟ್ರೀಯ ಸಮಿತಿ ಆಯೋಜಿಸಿದ ಅಸುಫ್ಫಾ ಪರೀಕ್ಷೆಯಲ್ಲಿ ಪ್ರಥಮ ಪಡೆದ ಉಮ್ಮರ್ ಗೇರುಕಟ್ಟೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ಐ.ಸಿ.ಎಫ್.ನ ಯೂಸುಫ್ ಸಅದಿ, ಮೊಹಿಯುದ್ದೀನ್ ಸಖಾಫಿ, ಡಿ.ಕೆ.ಎಸ್.ಸಿಯ ಮಹಮೂದ್ ಮುಸ್ಲಿಯಾರ್ ಉದ್ದಬೆಟ್ಟು, ಕೆಸಿಎಫ್ ಮದೀನಾ ವಲಯ ಅಧ್ಯಕ್ಷ ಫಾರೂಕ್ ನಈಮಿ, ಕೆಸಿಎಫ್ ಮದೀನಾ ಸೆಕ್ಟರ್, ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ, ಕೆಸಿಎಫ್ ಮದೀನಾ ಝೋನಲ್ ರಿಲೀಫ್ ಚೇರ್ಮನ್ ತಾಜುದ್ದೀನ್ ಸುಳ್ಯ, ರಝಾಕ್ ಅಳಕೆ ಮಜಲ್, ಡಾ.ರಫೀಕ್ ಉಪ್ಪಳ, ವಹಾಬ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.