ಬೆಂಗಳೂರು: ರಾಜ್ಯದ ಪವರ್ ಅಂಡ್ ಪವರ್ ಪುಲ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಅವರಿಗೆ ಸಂಕಷ್ಟ ಶುರುವಾಗಿದೆ. ಎಲೆಕ್ಷನ್ ನಿಂತು ಜಯಭೇರಿ ಬಾರಿಸಿ ಪಕ್ಷವನ್ನು ಮುನ್ನೆಡಸೋ ಉತ್ಸಾಹದಲ್ಲಿದ್ದ ಪವರ್ ಮಿನಿಸ್ಟರ್ ಈಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.
2017, ಆಗಸ್ಟ್ ತಿಂಗಳಲ್ಲಿ ಐಟಿ ರೇಡ್ ವೇಳೆ ದಾಖಲೆ ಹರಿದು ಹಾಕಿರೋ ಆರೋಪಕ್ಕೆ ಗುರಿಯಾಗಿರೋ ಪವರ್ ಮಿನಿಸ್ಟರ್ ಗೆ ಆರ್ಥಿಕ ಅಪರಾಧಗಳ ಕೋರ್ಟ್ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದೆ. ದಾಖಲೆ ಹರಿದು ಹಾಕಿರುವ ಬಗ್ಗೆ ಕೋರ್ಟ್ ಗೆ ಮಾಹಿತಿ ನೀಡಿದ ಐಟಿ ಅಧಿಕಾರಿಗಳಿಗೆ ಕೂಡಲೇ ಅವರ ವಿರುದ್ಧ ದೂರು ದಾಖಲಿಸಿ ಅಂತ ಸೂಚನೆ ನೀಡಿ ಮಾರ್ಚ್ 22 ರೊಳಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.
ಕೋರ್ಟ್ ಸೂಚನೆ ನೀಡುತ್ತಿದ್ದಂತೆ ಘಟನೆ ನಡೆದ ಈಗಲ್ ಟನ್ ರೆಸಾರ್ಟ್ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಸ್ಟೇಷನ್ನಲ್ಲಿ ಐಟಿ ಇಲಾಖೆ ಇಂದು ಐಪಿಸಿ ಸೆಕ್ಷನ್ 201 ಮತ್ತು 204 ಜೊತೆಗೆ ಐಟಿ ಸೆಕ್ಷನ್ 276 (ಸಿ)ಯ ಅಡಿಯಲ್ಲಿ ದೂರು ನೀಡಲು ಸಿದ್ದತೆ ಮಾಡಿಕೊಂಡಿದೆ. ದೂರು ದಾಖಲಾಗುತ್ತಿದ್ದಂತೆ ಎಫ್ಐಆರ್ ದಾಖಲಿಸಲಿರೋ ಪೊಲೀಸರು ಡಿ.ಕೆ.ಶಿವಕುಮಾರ್ ಅವರನ್ನ ಬಂಧಿಸೋ ಸಾಧ್ಯತೆಯನ್ನು ಸಹ ತಳ್ಳಿಹಾಕುವಂತಿಲ್ಲ.
ಇನ್ನೊಂದು ಕಡೆ ಈಗಾಗಲೇ ಕೋರ್ಟ್ ಆದೇಶದಿಂದ ಬಂಧನದ ಭೀತಿ ಎದುರಿಸುತ್ತಿರೋ ಡಿ ಕೆ ಶಿವಕುಮಾರ್ ಇಂದು ಆರ್ಥಿಕ ಅಪರಾಧಗಳ ಕೋರ್ಟ್ ನೀಡಿರೋ ಆದೇಶದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಬಗ್ಗೆ ತಮ್ಮ ವಕೀಲರ ಜೊತೆ ಮಾತುಕತೆ ನಡೆಸಿರೋ ಡಿ.ಕೆ.ಶಿವಕುಮಾರ್ ಯಾವುದಕ್ಕೂ ರೆಡಿ ಇರುವಂತೆ ವಕೀಲರಿಗೆ ಸೂಚನೆ ನೀಡಿದ್ದಾರೆ ಅಂತಾ ಎನ್ನಲಾಗಿದೆ.