ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಆರೋಪಗಳೆಲ್ಲ ಬೇಸ್ ಲೆಸ್ ಆಗಿದೆ. ನಾನಾಗಿದ್ರೆ ನೀರವ್ ಮೋದಿಯನ್ನು ದೇಶ ಬಿಟ್ಟು ಹೋಗಲು ಖಂಡಿತ ಬಿಡ್ತಿರಲಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೀ ಭ್ರಷ್ಟ ಪ್ರಧಾನಿಯಾಗಿದ್ದು, ಹಿಂದಿನ ಸರ್ಕಾರದಲ್ಲಿ ಲೂಟಿ ಮಾಡಿ ಜೈಲಿಗೆ ಹೋದವರನ್ನ ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ. ಇವರ ಸರ್ಕಾರ ಇರುವಾಗಲೇ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ನೀರವ್ ಮೋದಿ 11,000 ಕೋಟಿ ಟೋಪಿ ಹಾಕಿ ಹೋಗಿದ್ದಾನೆ. ಏನ್ ಮಾಡಿದ್ರು ಇವರು, ಇವರ ಕುಮ್ಮಕ್ಕಿಲ್ಲದೇ ಓಡಿ ಹೋಗಿದ್ದಾರಾ? ನಾನಾಗಿದ್ದರೆ ಖಂಡಿತ ಬಿಡ್ತಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೈಸೂರಿಗ ಆಗಿದ್ರೆ ಬ್ಯಾಂಕ್ ಲೂಟಿಕೋರ ಓಡಿಹೋಗ್ತಿರಲಿಲ್ಲ- ಪ್ರಧಾನಿಗೆ ಸಿಎಂ ತಿರುಗೇಟು
ಪ್ರಧಾನಿ ಮೋದಿ ಅವರಿಗೆ ದೇಶದ, ರಾಜ್ಯದ ಸಮಸ್ಯೆಗಳು ಕಾಣಿಸುತ್ತಿಲ್ಲ. ಸಾಲ ಮನ್ನಾ, ರೈತರ ಸಮಸ್ಯೆ, ವಿವಿಧ ಸಮಸ್ಯೆಗಳ ಬಗ್ಗೆ ಮಾತನಾಡದೇ ಕೇವಲ ಕಮೀಷನ್ ವಿಚಾರ ಮಾತ್ರ ಪ್ರಸ್ತಾಪ ಮಾಡಿದ್ದಾರೆ. ಅವರದ್ದೇ ಸರ್ಕಾರ ಇದೆ, ಕಮೀಷನ್ ಬಗ್ಗೆ ಮಾಹಿತಿ ಇದ್ರೆ ನೀಡಲಿ ಅಂತ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜೈಲಿಗೆ ಹೋದ ಯಡಿಯೂರಪ್ಪನನ್ನು ಪಕ್ಕದಲ್ಲಿ ಕೂಡಿಸಿಕೊಂಡು ಆರೋಪ ಮಾಡುತ್ತಾರೆ. ಯಡಿಯೂರಪ್ಪ ಅವಧಿಯಲ್ಲೇ ಅತಿ ಹೆಚ್ಚು ಕಮೀಷನ್ ವ್ಯವಹಾರ ನಡೆದಿರೋದು. 100% ಕಮೀಷನ್ ಯಡಿಯೂರಪ್ಪ ಕಾಲದಲ್ಲಿ ನಡೆದಿದೆ. ನಮ್ಮದು ಕಮೀಷನ್ ವ್ಯವಹಾರ ನಡೆದಿರೋದಕ್ಕೆ ಯಾವುದಾದರೂ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಇಷ್ಟೊಂದು ಬೇಜಾವಾಬ್ದಾರಿ ಹಾಗೂ ಕೀಳು ಮಟ್ಟದ ರಾಜಕಾರಣವನ್ನು ಮೋದಿಯವರು ಮಾಡುತ್ತಿದ್ದಾರೆ. ಕಮೀಷನ್ ಏಜೆಂಟ್ ಮೋದಿ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: Commission ಸರ್ಕಾರವನ್ನು ತೊಲಗಿಸಿ Mission ಸರ್ಕಾರವನ್ನು ತನ್ನಿ: ಪ್ರಧಾನಿ ಮೋದಿ
ಇದೇ ವೇಳೆ ಮಾಧ್ಯಮದವರ ಮೇಲೆ ಶಾಸಕ ಹ್ಯಾರಿಸ್ ಮಗ ನಲಪಾಡ್ ಗ್ಯಾಂಗ್ ಹಲ್ಲೆ ಹಾಗೂ ನಾರಾಯಣ ಸ್ವಾಮಿ ಬೆಂಬಲಿಗನ ಗೂಂಡಾ ವರ್ತನೆಯ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.