ಮಂಡ್ಯ: ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಬಿಲ್ ನೀಡಲು ಲಂಚ ಪಡೆದ ಆರೋಪದ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷನನ್ನು ವಜಾಗೊಳಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ, ಹುಲಿಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಂ.ಸಿದ್ದರಾಜು ಎಂಬವರೇ ವಜಾಗೊಂಡವರು. ಮೈಸೂರಿನ ಟೆಕ್ ಫ್ರೇಕ್ಸ್ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ನಿಂದ, ಗ್ರಾಮ ಪಂಚಾಯತಿಗೆ ಸಿಸಿಟಿವಿ ಅಳವಡಿಸಿದ್ರು. ಅದರ ಬಿಲ್ಲಿನ ಮೊತ್ತ ಸುಮಾರು 12 ಸಾವಿರಸ 72 ರೂಪಾಯಿಗಳಾಗಿತ್ತು. ಆದ್ರೆ ಇದನ್ನು ಪಾವತಿ ಮಾಡಲು ಸಿದ್ದರಾಜು, ಎರಡು ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರೆಂಬ ಆರೋಪ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಟೆಕ್ ಫ್ರೇಕ್ಸ್ ಸಾಫ್ಟ್ವೇರ್ ಪ್ರೈ ಲಿಮಿಟೆಡ್ ಎಸಿಬಿಗೆ ದೂರು ಸಲ್ಲಿಸಿದ್ರು. ಅದರಂತೆ ಫೆಬ್ರವರಿ 5, 2016ರಂದು ಎಸಿಬಿಯವರು ಎರಡು ಸಾವಿರ ಹಣದೊಂದಿಗೆ ಅಧ್ಯಕ್ಷರನ್ನ ವಶಕ್ಕೆ ಪಡೆದಿದ್ರು. ಮೇಲ್ನೊಟಕ್ಕೆ ಸಿದ್ದರಾಜು ದುರ್ನಡತೆ ನಡೆಸಿರೋ ಆರೋಪ ಕಂಡು ಬಂದಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48ರ ಉಪಪ್ರಕರಣ 4ರ ಅನ್ವಯ ಸಿದ್ದರಾಜು ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿರುವ ಟಿ.ವಿ.ಕುಮಾರ್ ಅವರು ಸಿದ್ದರಾಜು ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.