ಹುಬ್ಬಳ್ಳಿ: ನಗರದಲ್ಲಿ ನಡೆದ ಎಸಿಬಿ ದಾಳಿ ವೇಳೆಯಲ್ಲಿ ಒಂದು ಕೋಟಿಗೂ ಅಧಿಕ ಬೆಲೆಬಾಳುವ 5 ಸಾವಿರಕ್ಕೂ ಅಧಿಕ ಸೀರೆಗಳು ಪತ್ತೆಯಾಗಿವೆ.
ಇಂದು ಬೆಳಗ್ಗೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿಯಲ್ಲಿ ಅಪಾರ ಪ್ರಮಾಣದ ಅಸ್ತಿ ಪಾಸ್ತಿ ಜೊತೆ ಸಾವಿರಾರು ರೇಷ್ಮೇ ಸೀರೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಸುಮಾರು ಎರಡು ಕೊಠಡಿಗಳಲ್ಲಿ ಸಂಗ್ರಹಿಸಿಟ್ಟಿದ್ದ ಸೀರೆಗಳನ್ನು 10 ಜನ ಅಧಿಕಾರಿಗಳು ಎಣಿಸುತ್ತಿದ್ದಾರೆ. ಕರಿಯಪ್ಪ ಅವರ ಮನೆಯಲ್ಲಿ ದೊರೆತಿರುವ ಒಂದೊಂದು ಸೀರೆಯ ಬೆಲೆ ಅಂದಾಜು 10 ರಿಂದ 15 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ.
ಎಸಿಬಿ ದಾಳಿ ವೇಳೆಯಲ್ಲಿ ಕರಿಯಪ್ಪ ಅವರು ಹುಬ್ಬಳ್ಳಿ ನಗರದಲ್ಲಿ ಎರಡು ಬಂಗಲೆ, ಬೆಂಗಳೂರಿನ ನೆಲಮಂಗಲದ ಬಳಿ ಒಂದು ಪ್ಲಾಟ್ ಮತ್ತು ಬೆಂಗಳೂರಿನಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ. ಅಪಾರ ಪ್ರಮಾಣದ ಕೃಷಿ ಭೂಮಿ, ವಿವಿಧೆಡೆ ನಿವೇಶನಗಳನ್ನು ಹೊಂದಿದ್ದು ಪತ್ತೆಯಾಗಿದೆ. ಕರಿಯಪ್ಪ ಎರಡು ಬ್ಯಾಂಕ್ ಲಾಕರ್ಗಳಲ್ಲಿ 40 ಗ್ರಾಂ. ಚಿನ್ನಾಭರಣ ದೊರಕಿದೆ. ಇನ್ನು ಕರಿಯಪ್ಪರ ಇಬ್ಬರು ಮಕ್ಕಳು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮನೆಯಲ್ಲಿ 7.50 ಲಕ್ಷ ನಗದು ಹಾಗೂ ಕಚೇರಿಯಲ್ಲಿ 1.30 ಲಕ್ಷ ನಗದು ಹಣ ದೊರೆತಿದೆ.