ಮಂಡ್ಯ: ಶ್ರೀರಂಗಪಟ್ಟಣದ (Srirangapatna) ಜಾಮಿಯಾ ಮಸೀದಿ (Jamia Masjid) ಬಳಿ ಇವತ್ತು ಕೇಸರಿ ಕಹಳೆ ಮೊಳಗಿತ್ತು. ಜಾಮಿಯಾ ಮಸೀದಿ ಸ್ಥಳದಲ್ಲೇ ಮೂಡಲಬಾಗಿಲು ಆಂಜನೇಯ ದೇಗುಲ (Anjaneya Temple) ಪ್ರತಿಷ್ಠಾಪನೆಗೆ ಹಕ್ಕೊತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಹನುಮ ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿತ್ತು. ಯಾತ್ರೆಯಲ್ಲಿ ಸಾವಿರಾರು ಹನುಮ ಮಾಲಾಧಾರಿಗಳು `ಜೈ ಶ್ರೀರಾಮ್.. ಜೈ ಹನುಮಾನ್’ ಘೋಷಣೆ ಮೊಳಗಿಸಿದರು.
ನಿಮಿಷಾಂಭ ದೇಗುಲ, ಗಂಜಾಂ ಬೇಸಿಗೆ ಅರಮನೆ, ಶ್ರೀರಂಗಪಟ್ಟಣ ಬಸ್ ನಿಲ್ದಾಣ, ಜಾಮೀಯಾ ಮಸೀದಿ, ಪೇಟೆ ಬೀದಿ ಮೂಲಕ ರಂಗನಾಥ ಸ್ವಾಮಿ ದೇಗುಲ ಆವರಣದಲ್ಲಿ ಯಾತ್ರೆ ಅಂತ್ಯವಾಯಿತು. ಸಂಕೀರ್ತನಾ ಯಾತ್ರೆಯಲ್ಲಿ ಹನುಮ ಮಾಲಾಧಾರಿಗಳ ಜೊತೆ ಆಂಜನೇಯ, ರಾಮ ವೇಷಧಾರಿಗಳೂ ಪ್ರತ್ಯಕ್ಷರಾದರು. ಜಾಮಿಯಾ ಮಸೀದಿ ಬಳಿ ಬಂದಾಗ ಹಿಂದೂ ಕಾರ್ಯಕರ್ತರು ನುಗ್ಗಲು ಯತ್ನಿಸಿದರು. ಇದು ಜಾಮಿಯಾ ಮಸೀದಿ ಅಲ್ಲ; ಮೂಡಲಬಾಗಿಲು ಆಂಜನೇಯನ ದೇಗುಲ. ಹನುಮನ ಪಾದದ ಮೇಲಾಣೆ, ಮಂದಿರವಿಲ್ಲೇ ಕಟ್ಟುವೆವು, ಅಯೋಧ್ಯೆಯಲ್ಲಿ ರಾಮ ಮಂದಿರ. ಇಲ್ಲಿ ಹನುಮ ಮಂದಿರ ಎಂದು ಮುಗಿಲು ಮುಟ್ಟುವಂತೆ ಘೋಷಣೆ ಮೊಳಗಿಸಿದರು.
ಸಾವಿರಾರು ಹನುಮ ಭಕ್ತರು ಜಮಾಯಿಸಿದ್ದರಿಂದ ಜಾಮಿಯ ಮಸೀದಿ ಸಮೀಪ ಇಡೀ ದಿನ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ವಿಷಮ ಆಗಲು 1,500ಕ್ಕೂ ಹೆಚ್ಚು ಪೊಲೀಸರು ಅರೆ ಕ್ಷಣವೂ ಅವಕಾಶ ಕೊಡಲಿಲ್ಲ. ಡ್ರೋಣ್ ಕ್ಯಾಮೆರಾ, ಸಿಸಿಟಿವಿಗಳ ಮೂಲಕವೂ ನಿಗಾ ಇಟ್ಟಿದ್ದರು. ಆದರೂ ಹನುಮ ಮಾಲಾಧಾರಿಗಳು ಪೊಲೀಸರ ಮಧ್ಯೆ ತಳ್ಳಾಟ-ನೂಕಾಟ ಸಂಭವಿಸಿತ್ತು. ಪ್ರತಿ ಕಡೆಯೂ ಹಂತದಲ್ಲೂ ಸಾರ್ವಕರ್ ಸೇರಿದಂತೆ ಹಿಂದೂ ಹೋರಾಟಗಾರರ ಭಾವಚಿತ್ರ ರಾರಾಜಿಸಿತು. ಇದನ್ನೂ ಓದಿ: ಮೊಬೈಲ್ನಲ್ಲೇ ಕ್ರೆಡಿಟ್ ಕಾರ್ಡ್ ಮಾಡಿಕೊಡೋದಾಗಿ ನಂಬಿಸಿ 1.13 ಲಕ್ಷ ಪಂಗನಾಮ
ಸಂಜೆ ಹೊತ್ತಿಗೆ ಸಂಕೀರ್ತನಾ ಯಾತ್ರೆ ರಂಗನಾಥ ದೇಗುಲದ ಬಳಿ ಅಂತ್ಯವಾಯಿತು. ಜಾಮಿಯಾ ಮಸೀದಿ ಇರುವ ಸ್ಥಳದಲ್ಲೇ ಮೂಡಲಬಾಗಿಲ ಆಂಜನೇಯನ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡ್ತೇವೆ ಅಂತ ಸಾವಿರಾರು ಹನುಮ ಮಾಲಾಧಾರಿಗಳು, ಹಿಂದೂ ಕಾರ್ಯಕರ್ತರು ಹನುಮಂತನ ಹೆಸರಿನಲ್ಲಿ ಸಂಕಲ್ಪ ಮಾಡಿದ್ದಾರೆ. ಇನ್ನು, ರಾಜಕೀಯಕ್ಕಾಗಿ ಬಿಜೆಪಿ ಬೆಂಬಲ ಕೊಟ್ಟಿಲ್ಲ. ಹಿಂದುತ್ವಕ್ಕಾಗಿ ಬಿಜೆಪಿ ಸಂಕೀರ್ತನಾ ಯಾತ್ರೆಗೆ ಬೆಂಬಲ ನೀಡಿದೆ. ಟಿಪ್ಪು, ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದಾನೆ. ಇದನ್ನು ವಿರೋಧಿಸಿ ಸಂಕೀರ್ತನಾ ಯಾತ್ರೆ ನಡೆಯುತ್ತಿದೆ. ಮಂದಿರ ಆಗುವವರೆಗೆ ನಾವು ಈ ರೀತಿ ಹೋರಾಟ ಮಾಡುತ್ತೇವೆ ಅಂತ ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ ಮತ್ತು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಹೇಳಿದರು. ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಜನರ ಮೇಲೆ ಹರಿದ ಟ್ರಕ್ – 6 ಮಂದಿ ದುರ್ಮರಣ, 10 ಮಂದಿಗೆ ಗಾಯ