ಉಡುಪಿ: ಧಾರ್ಮಿಕ ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕರಾವಳಿಗೆ ಅಗ್ರಸ್ಥಾನವಿದೆ. ಪ್ರಮುಖ ಪ್ರವಾಸಿ ತಾಣಗಳು ಕೂಡಾ ಕರಾವಳಿಲ್ಲಿಯೇ ಇದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆದು ಲಾಭಗಳಿಸುವುದರಲ್ಲಿ ಉಡುಪಿ ಜಿಲ್ಲೆ ಹಿನ್ನಡೆ ಅನುಭವಿಸಿರುವ ಕಾರಣ ಕರಾವಳಿಗೆ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಉಡುಪಿಯಲ್ಲಿ ಹೆಲಿ ಟೂರಿಸಂ ಆರಂಭವಾಗಿದೆ.
ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮಹತ್ವಕಾಂಕ್ಷಿ ದೃಷ್ಟಿಯಿಂದ ಯೋಜನೆಯನ್ನು ಆರಂಭಿಸಿದ್ದು, 2500 ರೂ. ಪಾವತಿಸಿ 6 ಮತ್ತು 8 ನಿಮಿಷದ ಎರಡು ಪ್ಯಾಕೇಜ್ ಮೂಲಕ ಆಕಾಶ ಮಾರ್ಗವಾಗಿ ಉಡುಪಿಯ ಪ್ರಾಕೃತಿಕ ಸೌಂದರ್ಯವನ್ನು ಹೆಲಿಕಾಪ್ಟರ್ ನಲ್ಲಿ ಸವಿಯಬಹುದು.
ಅದರಲ್ಲೂ ಸಮುದ್ರದ ಮೇಲೆ ಕಾಪ್ಟರ್ ಹಾರುವ ದೃಶ್ಯವಂತೂ ನಿಜಕ್ಕೂ ರೋಮಾಂಚನ ಎನಿಸುತ್ತದೆ. ನದಿ, ಸಮುದ್ರ, ಬೆಟ್ಟಗುಡ್ಡ, ಮಣಿಪಾಲದ ಗಗನಚುಂಬಿ ಕಟ್ಟಡಗಳನ್ನು ಮೇಲಿಂದ ನೋಡೋ ಅವಕಾಶ ಸಿಕ್ಕಿದೆ. ಉಡುಪಿಗೆ ಬರುವ ಜನರಿಗೆ ಸುಮಾರು 10 ದಿನಗಳ ಹೆಲಿಕಾಪ್ಟರ್ ಸೇವೆ ಲಭ್ಯವಿರಲಿದೆ.
ಸಚಿವ ಪ್ರಮೋದ್ ಮಧ್ವರಾಜ್ ಪ್ರಥಮ ಬಾರಿಗೆ ಉಡುಪಿಯನ್ನು ಹೆಲಿಕಾಪ್ಟರ್ ನಲ್ಲಿ ನೋಡಿದ ಅನುಭವ ಹಂಚಿಕೊಂಡರು. ಅತ್ಯಂತ ಸುಂದರ ಉಡುಪಿಯನ್ನು ಹೆಲಿಕಾಪ್ಟರ್ ನಲ್ಲಿ ಸುತ್ತವ ಮೂಲಕ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಗೆ ಉಡುಪಿಗೆ ಬರುವ ಜನರಿಗೆ ಹೆಲಿಕಾಪ್ಟರ್ ನಲ್ಲಿ ಹಾರುವ ಅವಕಾಶ ಸಿಕ್ಕಿದೆ.