ಬೆಂಗಳೂರು: ಕಳೆದ ರಾತ್ರಿ ನಗರದಲ್ಲಿ ಸುರಿದ ಮಹಾ ಮಳೆಗೆ 7 ಜನರ ದಾರುಣ ಸಾವು ಸಂಭವಿಸಿದ್ದು, ದುರ್ಘಟನೆ ಕುರಿತು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆಯನ್ನು ಎದುರಿಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಹಲವು ವರ್ಷಗಳ ಹಿಂದೆಯೇ ಸೂಕ್ತ ಅಭಿವೃದ್ಧಿ ಯೋಜನೆಗಳನ್ನು ಆರಂಭ ಮಾಡಬೇಕಾಗಿತ್ತು ಆದರೆ ಮಾಡಿಲ್ಲ. ನಮ್ಮ ಸರ್ಕಾರವು ಇಂದು 1200 ಕೋಟಿ ರೂ. ಗಳ ರಾಜಕಾಲುವೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದೇವೆ. ಶೀಘ್ರವೇ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ನಾವು ಅಧಿಕಾರ ವಹಿಸಿಕೊಂಡಾಗ ಬೆಂಗಳೂರು 50 ಕಿ.ಮೀ ಮಾತ್ರ ರಾಜಕಾಲುವೆ ಇತ್ತು. ಇಂದು ಈ ಕಾಲುವೆಗಳನ್ನು 350 ಕಿ.ಮೀ ವರೆಗೆ ವಿಸ್ತರಿಸಿದ್ದೇವೆ. ಇನ್ನು ಒಂದು ವರ್ಷದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಅಂತ ಅವರು ಭರವಸೆ ನೀಡಿದ್ರು.
ಇದೇ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಸಾವನ್ನಪ್ಪಿರುವ ಜನರಿಗೆ ತಲಾ 5 ಲಕ್ಷ ರೂ.ಗಳನ್ನು ಪರಿಹಾರವಾಗಿ ಘೋಷಿಸಿರುವುದಾಗಿ ತಿಳಿಸಿದರು.