ವಿಜಯಪುರ: ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಗುಡುಗು ಸಹಿತ ಮಳೆ ಮುಂದುವರೆದಿದ್ದು, ಒಂದೇ ದಿನದಲ್ಲಿ ಸಿಡಿಲಿಗೆ ಬಲಿಯಾದವರ ಸಂಖ್ಯೆ 9 ಕ್ಕೆ ಏರಿಕೆ ಆಗಿದೆ.
ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಬರಡೋಲಿ ಬಳಿ ಇಬ್ಬರು ಬಾಲಕಿಯರು ಸಿಡಿಲಿಗೆ ಬಲಿಯಾಗಿದ್ದಾರೆ. 8 ವರ್ಷದ ಪ್ರತಿಭಾ ಹನುಮಂತ ಸಂಖ್ ಹಾಗೂ 13 ವರ್ಷದ ಪೂಜಾ ಈರಣ್ಣ ಮೇಡೆದಾರ್ ಮೃತ ರ್ದುದೈವಿಗಳು.
ಮೂಲತಃ ಇಂಡಿ ತಾಲೂಕಿನ ಚೋರಗಿ ಗ್ರಾಮದ ಇವರು ಜಮೀನಿಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸಾವನ್ನಪ್ಪಿದ ಬಾಲಕಿಯರ ಜೊತೆಗಿದ್ದ ಮತ್ತಿಬ್ಬರು ಬಾಲಕಿಯರು ಸಿಡಿಲಿನಿಂದ ಪಾರಾಗಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಬ್ಬರದ ಪ್ರಚಾರದಲ್ಲಿ ಬೊಬ್ಬಿರಿದ ಮಳೆರಾಯ- ಧರೆಗುರುಳಿತು ಶಾಸಕ ಶಿವರಾಜ್ ತಂಗಡಗಿ ಪ್ರಚಾರಕ್ಕಾಗಿ ನಿರ್ಮಿಸಿದ್ದ ಶೆಡ್
ಮತ್ತೊಂದು ಘಟನೆಯಲ್ಲಿ ಜಿಲ್ಲೆಯ ಸಿಂದಗಿ ಪಟ್ಟಣದ ಆರ್.ಡಿ. ಪಾಟೀಲ ಕಾಲೇಜು ಆವರಣದಲ್ಲಿ ಆಟವಾಡುತ್ತಿದ್ದ ಬಾಲಕ ಸತೀಶ ನಾರಾಯಣಪುರ (16) ಸಿಡಿಲಿಗೆ ಬಲಿಯಾಗಿದ್ದಾನೆ. ಶಾಲಾ ಆವರಣದಲ್ಲಿ ರನ್ನಿಂಗ್ ಮಾಡುವಾಗ ದುರ್ಘಟನೆ ನಡೆದಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲಿನ ಅಬ್ಬರಕ್ಕೆ ಯಾದಗಿರಿಯಲ್ಲಿ ಐದು ಜನ ಬಲಿಯಾಗಿದ್ದಾರೆ. ಪ್ರತ್ಯೇಕ ನಾಲ್ಕು ಘಟನೆಯಲ್ಲಿ ತಂದೆ-ಮಗ ಸೇರಿ ಒಟ್ಟು ಐದು ಜನ ಸಿಡಿಲಿಗೆ ಮೃತಪಟ್ಟಿದ್ದಾರೆ. ಶಾರದಹಳ್ಳಿಯಲ್ಲಿ ತಂದೆ-ಮಗ, ಪೀರಗಾರದೊಡ್ಡಿಯಲ್ಲಿ ದನಗಾಯಿ ಬಾಲಕ ಮೌನೇಶ, ಚಿಂತನಹಳ್ಳಿಯಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಈಶ್ವರಮಂದಿರಕ್ಕೆ ಹೋದ ಬುಗ್ಗಪ್ಪ, ಮೈಲಾಪುರ ಗ್ರಾಮದಲ್ಲಿ ಕುಮಾರ ಎಂಬಾತ ಮೃತಪಟ್ಟಿದ್ದಾನೆ. ಯಾದಗಿರಿ ಜಿಲ್ಲೆಯಲ್ಲಿ ಸಿಡಿಲಿನ ಆರ್ಭಟಕ್ಕೆ ರಾಮಸಮುದ್ರ ಗ್ರಾಮದ ಹೋರಭಾಗದಲ್ಲಿ 12 ಕುರಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು
ಇನ್ನು ರಾಯಚೂರಿನ ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಸಿಡಿಲು ಬಡಿದು ಓರ್ವ ಯುವಕ ಹಾಗೂ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ಸಾಲಗುಂದ ಗ್ರಾಮದ 34 ವರ್ಷದ ಮೆಹಬೂಬ ರಾಜಾ ನಾಯ್ಕ್ ಮೃತ ದುರ್ದೈವಿ. ಮೇಕೆ ಕಾಯಲು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.