ಬೆಂಗಳೂರು: ಎರಡು ದಿನ ವಿಶ್ರಾಂತಿ ಕೊಟ್ಟಿದ್ದ ವರುಣ ನಿನ್ನೆ ರಾತ್ರಿಯಿಡಿ ಅಬ್ಬರಿಸಿದ್ದಾನೆ. ಗುಡುಗು ಸಿಡಿಲು ಸಹಿತ ಭಾರೀ ಮಳೆಗೆ ಬೆಂಗಳೂರು ಹೊಳೆಯಂತಾಗಿದೆ.
60ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಶಿವಾನಂದ ಸರ್ಕಲ್ನಲ್ಲಿ ರೇಲ್ವೆ ಕೆಳಸೇತುವೆ ಬಳಿ ನೀರು ತುಂಬಿದ್ದ ಕಾರಣ ಆಂಬುಲೆನ್ಸ್ ಪರದಾಡ್ತು. ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣ, ಮಡಿವಾಳ, ಮಾರುತಿನಗರ, ಆನೇಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕಸ್ತೂರ್ಬಾ ರಸ್ತೆಯಲ್ಲಿ ಕಾರ್ ಮೇಲೆ ಮರ ಬಿದ್ದು ಜಖಂ ಆಗಿದೆ. ಮೆಜೆಸ್ಟಿಕ್, ಮಲೇಶ್ವರಂ, ವಿಜಯನಗರ, ಯಲಹಂಕ, ರಾಜಾಜಿನಗರ, ಮಂಜುನಾಥ ನಗರ, ಪುಲಕೇಶಿನಗರ, ಹೆಬ್ಬಾಳ, ಜಯನಗರ, ಯಲಹಂಕ, ಯಶವಂತಪುರ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ಗಾಳಿ ಸಹಿತ ಭಾರೀ ಮಳೆಯಾಗಿದೆ.
ಮಳೆಯ ಪರಿಣಾಮ ಮೇಖ್ರಿಸರ್ಕಲ್, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ್ರು. ಇನ್ನು ಮೈಕೋಲೇಔಟ್, ಸಂಪಂಗಿರಾಮನಗರ, ಬಸವೇಶ್ವರನಗರ, ಡಬ್ಬಲ್ ರೋಡ್ಗಳಲ್ಲಿ ಮರಗಳು ಧರೆಗುರುಳಿದ್ವು. ವಿದ್ಯುತ್ ಸಂಪರ್ಕ ಕಡಿತಗೊಂಡು ಅರ್ಧ ಬೆಂಗಳೂರು ಕತ್ತಲಲ್ಲಿ ಮುಳುಗಿತ್ತು.
ಮಳೆ ಅವಾಂತರಕ್ಕೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಮಂದಿ ರಾತ್ರಿಯಿಡಿ ಬಿಬಿಎಂಪಿ ಹೆಲ್ಪ್ಲೈನ್ಗೆ ಕರೆ ಮಾಡಿ ದೂರುಗಳನ್ನ ನೀಡಿದ್ರು. ಕಂಟ್ರೋಲ್ ರೂಮ್ನಲ್ಲಿ ಮೇಯರ್ ಪದ್ಮಾವತಿ ಹಾಗೂ ವಿಶೇಷ ಕಮಿಷನರ್ ಮನೋಜ್ಕುಮಾರ್ ದೂರುಗಳನ್ನ ಆಲಿಸಿದ್ರು.