– ಹಳ್ಳಿಗಳಿಗೆ ಹೋಗಿ ಮಲಗುವಾಗ ಹಾಸಿಗೆ, ದಿಂಬು, ಹೊದಿಕೆ ತೆಗೆದುಕೊಂಡು ಹೋಗೋ ಕೆಲಸ ಮಾಡಲ್ಲ
ಚಿಕ್ಕಮಗಳೂರು: ಹೆಚ್.ಡಿ.ಕುಮಾರಸ್ವಾಮಿ ದೊಡ್ಡ ನಾಯಕರು, ನಾವು ಸಾಮಾನ್ಯ ಜನ ಅವರ ಬಗ್ಗೆ ನಾನು ಮಾತನಾಡೋದಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಜನಸಂಪರ್ಕ ಅಭಿಯಾನದ ಬಳಿಕ ಚಿಕ್ಕಮಗಳೂರಿನ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ನಿಮ್ಮ ಜನಸಂಪರ್ಕ ಅಭಿಯಾನ ರಾಜಕೀಯ ಗಿಮಿಕ್ ಎಂದು ಹೆಚ್ಡಿಕೆ ಹೇಳಿದ್ದಾರೆ ಎಂದಿದ್ದಕ್ಕೆ, ಅವರು ದೊಡ್ಡವರು ನಾನು ಅವರ ಬಗ್ಗೆ ಮಾತನಾಡೋದಿಲ್ಲ. ಆದ್ರೆ ಅವರು ಹಳ್ಳಿಗಳಿಗೆ ಹೋಗಿ ಮಲಗುವಾಗ ಹಾಸಿಗೆ, ದಿಂಬು, ಹೊದಿಕೆ, ಮಂಚ, ಒಂದು ದಿನದ ಮಟ್ಟಿಗೆ ಟಾಯ್ಲೆಟ್ ರೂಂ ಕಟ್ಟಿಸಿದ್ದು, ಮರು ದಿನ ಬೆಳಗ್ಗೆ ಬರುವಾಗ ಎಲ್ಲವನ್ನೂ ತೆಗೆದುಕೊಂಡು ಬರುವಂತಹ ಕೆಲಸವನ್ನ ನಾನು ನನ್ನ ಜೀವನದಲ್ಲಿ ಮಾಡೋದಿಲ್ಲ ಎಂದರು.
ಇದಕ್ಕೂ ಮುಂಚೆ ಚಿಕ್ಕಮಗಳೂರಿನ ಕೊಪ್ಪಾದಲ್ಲಿ ಮಾತನಾಡಿದ್ದ ಮಾಜಿ ಸಿಎಂ ಹೆಚ್ಡಿಕೆ, ಬಿಜೆಪಿ ರಾಜ್ಯಾಧ್ಯಕ್ಷರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡ್ತಾ, ದಲಿತರ ಮನೆಯಲ್ಲಿ ಉಪಹಾರವನ್ನ ಸೇವನೆ ಮಾಡೋ ಮುಖಾಂತರ ಅವರ ಕಷ್ಟಗಳ ಅರಿವು ಮೂಡಿಸಿಕೊಳ್ಳೋಕೆ ಈಗ ಪ್ರಯತ್ನ ಮಾಡ್ತಿದ್ದಾರೆ. ಐದು ವರ್ಷಗಳ ಕಾಲ ಆಡಳಿತ ನಡೆಸಬೇಕಾದ್ರೆ ಅವರ ಕಣ್ಣಿಗೆ ದಲಿತರು ಕಾಣಲಿಲ್ಲ. ದಲಿತರ ಮನೆಯಲ್ಲಿ ಊಟ, ತಿಂಡಿ ಮಾಡೋದ್ರಿಂದ ಅವರ ಸಮಸ್ಯೆಯನ್ನ ಅರಿಯೋಕೆ ಸಾಧ್ಯವಾಗುತ್ತಾ ಅಂತಾ ಅವರೇ ಒಂದ್ ಸಾರಿ ಆತ್ಮ ಮುಟ್ಟಿಕೊಂಡು ವಿಮರ್ಶೆ ಮಾಡಿಕೊಳ್ಳಲಿ ಎಂದು ಹೇಳಿದ್ರು.
ದಲಿತರ ಸಮಸ್ಯೆಯನ್ನ ಅರಿಯಬೇಕಾದ್ರೆ ಅವರ ಕೇರಿಗಳಿಗೆ ಹೋಗಿ ಬದುಕುಬೇಕು. ಆಗ ಸಮಸ್ಯೆಯ ಅರಿವಾಗುತ್ತೆ. ಪಕ್ಷದ ದಲಿತ ಕಾರ್ಯಕರ್ತನ ಮನೆಗೆ ಹೋಗಿ ಊಟ ಮಾಡಿದ ಕೂಡಲೇ ಅವರ ಸಮಸ್ಯೆಯನ್ನೆಲ್ಲಾ ತಲೆಯಲ್ಲಿ ತುಂಬಿಕೊಳ್ಳೋಕೆ ಸಾಧ್ಯವಿಲ್ಲ ಅಂದ್ರು.