ರಾಯಚೂರು: ಇದೇ ನವೆಂಬರ್ ತಿಂಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾಗಲಿದ್ದು, ಸಾಕಷ್ಟು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರಲಿವೆ ಎಂದು ಜೆಡಿಎಸ್ ವಕ್ತಾರ ವೈಎಸ್ವಿ ದತ್ತಾ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ದತ್ತಾ, ಗೌಡರ ಆತ್ಮಚರಿತ್ರೆ ತಾವೇ ಬರೆಯುತ್ತಿದ್ದು ಅನೇಕ ರಾಜಕಾರಣಿಗಳ ವಾಸ್ತವ ಚಿತ್ರಣಗಳು ಬಯಲಾಗಲಿವೆ. ಎಲ್ಲಾ ರಾಷ್ಟ್ರೀಯ ಪಕ್ಷಗಳ ಬಣ್ಣಬಯಲಾಗಲಿದೆ. ಆಡಿಯೋ ರೂಪದಲ್ಲೂ ಆತ್ಮಚರಿತ್ರೆ ಹೊರತರುತ್ತಿದ್ದು, ಅಕ್ಟೋಬರ್ 11 ರಿಂದ ಒಂದೊಂದೆ ಸಂಗತಿಗಳ ಟ್ರೇಲರ್ ಬಿಡುಗಡೆ ಮಾಡಲಾಗುವುದು ಎಂದರು.
ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಥರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ತಮ್ಮ ಮೂಗಿನ ನೇರಕ್ಕೆ ಸಮೀಕ್ಷೆಗಳನ್ನ ಮಾಡಿಸುತ್ತಿವೆ. ಆದ್ರೆ ಜನ ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತರುವ ನಿರ್ಧಾರ ಮಾಡಿದ್ದಾರೆ ಎಂದರು. ಎಚ್.ಡಿ.ಕುಮಾರಸ್ವಾಮಿಯವರು ಗುಣಮುಖರಾದ ಮೇಲೆ ರಾಜ್ಯ ಪ್ರವಾಸ ಮಾಡಲಿದ್ದಾರೆ. ಇನ್ನೂ ನಾಲ್ಕು ತಿಂಗಳಲ್ಲಿ ಜನಾಭಿಪ್ರಾಯ ಬೆಳಕಿಗೆ ಬರಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ಕೇವಲ ಪ್ರಚಾರ ಪಡೆಯುತ್ತಿದೆ. ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಲ್ಲಿ ಸೋತಿದೆ ಅಂತ ಆರೋಪಿಸಿದರು. ಮೌಢ್ಯ ನಿಷೇಧ ಕಾಯಿದೆ ಜಾರಿಗೆ ತಮ್ಮ ಸಹಮತವಿದ್ದು, ಎಲ್ಲಾ ಧರ್ಮಗಳಿಗೂ ಅನ್ವಯವಾಗುವಂತ ಕಾಯಿದೆ ಜಾರಿ ಮಾಡಬೇಕು ಎಂದು ದತ್ತಾ ಹೇಳಿದರು.